“ಸತ್ಯೋಡ್ ಬತ್ತುಂಡ ತಿಗಲೆಡ್ ಸಾದಿ ಕೊರ್ಪ, ಅನ್ಯಾಯಡ್ ಬತ್ತುಂಡ ಸುರಿಯೋಡ್ ಸಾದಿ ತೋಜಾವ”
ಅವಳಿ ವೀರರು!
ಇವೆರಡು ಪದಗಳೆ ಸಾಕು ತುಳುನಾಡಿನ ಕಥನವನ್ನು ಜನರ ಮುಂದೆ ಸದ್ಯಾಂತವಾಗಿ ತೆರೆದಿಡಲು.
ತುಳುನಾಡಿನ ಚರಿತ್ರೆಯಲ್ಲಿ ನ್ಯಾಯಕ್ಕೆ ಎದೆಯ ಜಾಗ ಅನ್ಯಾಯಕ್ಕೆ ಕತ್ತಿಯ ಜಾಗ (ನ್ಯಾಯೊಗ ತಿಗಲೆದ ಸಾದಿ ಅನ್ಯಾಯೊಗು ಸುರಿಯದ ಸಾದಿ.) ತೋರಿದ ಕೋಟಿ ಚೆನ್ನಯರ ಆರಾಧನೆಯ ಪ್ರವಾಹ ಸುಳ್ಯ ತಾಲೂಕಿನಲ್ಲೂ ಹರಿಯುತ್ತಿರುವುದು ವರ್ತಮಾನದ ಸತ್ಯ ಮತ್ತು ನಂಬಿಕೆಯ ಸತ್ವ.
ಕೋಟಿ ಚೆನ್ನಯರ ಕಥೆಯ ಪ್ರತಿಯೊಂದು ವಿವರವೂ ಚಿತ್ತಾರವಾಗಿ ನಮ್ಮ ಕಣ್ಣ ಮುಂದೆ ಕುಣಿಯುತ್ತದೆ. ತುಳು ನಾಡಿನ ಮಣ್ಣಿನ ಕಣ ಕಣದ ಕಂಪು ಮೂಗನ್ನರಳಿಸುತ್ತದೆ. ಕೋಟಿ ಚೆನ್ನಯರ ಕಥೆ ಹೇಳುವ ಮೊದಲು ತುಳು ನಾಡಿನ ಆರಾಧನಾ ಸ್ವರೂಪವಾದ ಭೂತರಾಧನೆಯ ಕಥೆ ಕೇಳ ಬೇಕು.
ತುಳು ಜಾನಪದ ಆರಾಧನಾ ಪ್ರಕಾರಗಳಲ್ಲಿ ಭೂತರಾಧನೆ, ನಾಗಾರಾಧನೆ, ಸಿರಿ ಆರಾಧನೆ ಮುಖ್ಯ. ಭೂತರಾಧನೆಯಲ್ಲಿ ಕುಲ ಲಾಂಚನ ಪ್ರಾಣಿ ಸಂಬಂಧ ಭೂತಗಳು, ಮನುಷ್ಯ ಸಂಬಂಧ ಭೂತಗಳು ಪುರಾಣ ಸಂಬಂಧ ಭೂತಗಳು, ಪ್ರಾದೇಶಿಕ ಮಹತ್ವದ ಭೂತಗಳಿವೆ. ಮನುಷ್ಯ ಸಂಬಂಧ ಭೂತಗಳಲ್ಲಿ ಭೂತ ಸಂಪರ್ಕದಿಂದ ಮನುಷ್ಯ ಭೂತವಾಗಿ ಪರಿವರ್ತನೆಗೊಂಡದ್ದು ಒಂದು ಬಗೆಯಾದರೆ – ಅಕಾಲಮರಣ, ಆತ್ಮಹತ್ಯೆ, ಕೊಲೆ ಸಂಬಂಧ ಭೂತವಾಗಿ ಪರಿವರ್ತನೆಗೊಂಡದ್ದು ಎರಡನೆಯ ಬಗೆ. ಈ ಎರಡನೆ ಬಗೆಯಲ್ಲಿ ಅವಳಿ ವೀರರು, ಸಾಂಸ್ಕ್ರತಿಕ ವೀರರು ಇದ್ದಾರೆ. ಕಾರಣಿಕ ಪವಾಡ ಪುರುಷರೂ ಇದ್ದಾರೆ. ಅವಳಿ ವೀರರಲ್ಲಿ ಕಿನ್ನಿಮಾನಿ, ಪೂಮಾನಿ (ಉಳ್ಳಾಕುಲು), ಅಬ್ಭಗದಾರಗ (ಸಿರಿಕ್ಕುಳು), ವೀರವಿಕ್ರಮ (ಪೆರಿಯಾಕುಳು), ಕೋಟಿ ಚೆನ್ನಯ (ಬೈದ್ಯೆರ್ಲ್), ದೈಯ್ಯು ಸನಿ(ಮುಗೇರ್ಲು), ಕಾನದ ಕಾಟದವರು(ಮಾನ್ಯಲೆ ಪೆರ್ನಲೆ) ಮುಖ್ಯವಾದವುಗಳು.
ತುಳು ಜಾನಪದ ಸಂಸ್ಕೃತಿಯ ಕೋಟಿ ಚೆನ್ನಯರಿಗೆ ಮಧ್ಯಯುಗೀಯ ವ್ಯವಸ್ಥೆಯಿಂದ ತೊಡಗಿ ಸಮಕಾಲೀನ ಸಂಘ ಸಂಸ್ಥೆಗಳ ನಿರ್ವಹಣೆಯವರೆಗೆ ಚಾರಿತ್ರಿಕ ಆಯಾಮವಿದೆ. ಪಡುಮಲೆ, ಪಂಜ, ಎಣ್ಮೂರುಗಳಿಂದ ಮೊದಲ್ಗೊಂಡು ತುಳುನಾಡಿನ ಉದ್ದಗಲವರೆಗೆ ಭೌಗೋಳಿಕ ಆಯಾಮವಿದೆ. ಪರವರಿಂದ ತೊಡಗಿ ಬಿಲ್ಲವ, ಗೌಡ, ಬಂಟ ಜನಾಂಗಗಳವರೆಗೆ ಜನಾಂಗಿಕ ಆಯಾಮವಿದೆ. ಕಾಲ, ದೇಶ, ಜನಾಂಗ ಎಂಬ ಈ ಮೂರು ಆಯಾಮಗಳ ಸೇರ್ಪಡೆಯೊಂದಿಗೆ ತುಳುನಾಡಿನ ಜನರ ಮಾನಸಿಕ ಆಯಾಮವೂ ಇದೆ.