ಆ ದಿನ ಮದ್ಯಾಹ್ನ ಕೋಟಿ ಚೆನ್ನಯರು ತಾವು ಅಡಗಿ ಕೊಂಡಿದ್ದ ತುಪ್ಪೆ ಕಲ್ಲು ಕಾಡಿನಿಂದ ಹೊರಬಿದ್ದ ಮುಂದಿನ ದಾರಿಯನ್ನು ಹುಡುಕಿಕೊಂಡು ಅಲೆಯುತ್ತಿದ್ದರು. ಚೆನ್ನಯನು ನಿಂತು ಅಣ್ಣಾ ಇದೋ…. ಇಲ್ಲಿ ಗಡಿಕಲ್ಲು ಪಂಜ ಹಿಂದಾಕ್ಕಾಯಿತು. ಇದು ಎಣ್ಮೂರು ಎಂದನು. ಗಡಿ ಕಲ್ಲಿನ ಸುತ್ತ ಮುತ್ತ ನೋಡಿದಾಗ ಈ ಕಲ್ಲನ್ನು ಇತ್ತೀಚಿಗೆ ಹಾಕಿದಂತೆ ಕಂಡಿತು. ಹಸಿ ಮಣ್ಣು ಹರಡಿಕೊಂಡಿತ್ತು. ಆಗ ಚೆನ್ನಯ ಇದು ಮೊಸದ ಗಡಿಕಲ್ಲು ಗಡಿ ತಂಟೆಗಾಗಿ ಪಂಜದವರು ಗಡಿಕಲ್ಲನ್ನು ಇತ್ತ ಹಾಕಿದ್ದಾರೆ, ಎಂದವನು ಆ ಕಲ್ಲನ್ನು ಅಲುಗಾಡಿಸಿ ಕಿತ್ತು ಬಿಟ್ಟನು. ನಾಲ್ಲು ಜನ ಹೊರಲಾರದ ಕಲ್ಲನ್ನು ಬೆನ್ನಿನ ಆಸರೆಯುಂದ ಹೊತ್ತು ಆ ಪ್ರದೇಶದ ಎತ್ತರವಾದ ಪ್ರದೇಶಕ್ಕೆ ತಂದು ಹಾಕಿ ಅಲ್ಲೇ ಅದನ್ನು ನೆಟ್ಟು ಬಿಟ್ಟನು.
ಎಣ್ಮೂರು ಪಂಜದ ಗಡಿಕಲ್ಲು
ಎಣ್ಮೂರಿನ ಕಿನ್ನಿ ಚೆನ್ನಯನು ಸಂದಿಗಾಗಿ ಪಂಜಕ್ಕೆ ಹೊರಟಿದ್ದವನು ಈ ಯುವಕರನ್ನು ಕಂಡು ಮರೆಯಿಂದ ಇವರ ಚಲನ ವಲನವನ್ನು ವೀಕ್ಷಿಸಿದನು. ಮುಂದೆ ನೆಟ್ಟಗೆ ಇವರಿದ್ದಲ್ಲಿಗೆ ಬಂದನು ಕೋಟಿಯನ್ನು ಕುರಿತು ಕಿನ್ನಿ ಚೆನ್ನಯನು ಈತ ನಿನ್ನ ತಮ್ಮನೇ? ಎಂದು ಕೇಳಿದನು. ಈತ ಈ ಗಡಿ ಕಲ್ಲನ್ನು ಏಕೆ ಕಿತ್ತು ಬಿಟ್ಟ ಎಂದು ಪ್ರಶ್ನಿಸಿದನು. ಆ ಮಾತಿಗೆ ಕೋಟಿಯು ಹೌದು ಈತನೇ ನನ್ನ ತಮ್ಮ. ಇಲ್ಲಿ ಇರಬೇಕಾದ ಕಲ್ಲನ್ನು ಎಣ್ಮೂರು ಪ್ರದೇಶವನ್ನು ಕಬಳಿಸುದಕ್ಕಾಗಿ ಪಂಜದವರು (ಕೈ ತೋರಿಸಿ) ಅಲ್ಲಿ ಹಾಕಿದ್ದಾರೆ. ಆಗ ಚೆನ್ನಯ ಈ ಕಲ್ಲು ಎಣ್ಮೂರಿನ ಪ್ರದೇಶವನ್ನು ಏಕೆ ಎತ್ತಿಕೊಳ್ಳಬೇಕು? ಮುಂಚಿನ ರಿವಾಜಿಯಂತೆ ನಡೆಯಲಿ ಎಂದು ಮಾತು ಮುಗಿಸಿದನು. ಕಿನ್ನಿ ಚೆನ್ನಯ ದೈರ್ಯ ತಂದು ಕೊಂಡು…. ತಾವು ಯಾರು ಎಲ್ಲಿಂದ ಬಂದವರು? ನಿಮ್ಮನ್ನು ನೋಡುವಾಗ ಮೇಲಿನ ಲೋಕದಿಂದ ಬಂದವರ ಹಾಗೆ ಕಾಣಿಸುತ್ತಿರುವಿರಿ. ದಯಮಾಡಿ ನಿಮ್ಮ ಪರಿಚಯ ಹೇಳುವಿರಾ?ಎಂದು ಕೈ ಮುಗಿದು ಕೇಳಿಕೊಂಡರು.
ಆಗ ಕೋಟಿಯು ಆಯ್ಯಾ ನಾವಿಬ್ಬರು ಅಣ್ಣ ತಮ್ಮಂದಿರು. ಅವಳಿ ಜವಳಿ, ನಾನು ಕೋಟಿ ಇವನು ನನ್ನ ತಮ್ಮ ಚೆನ್ನಯ ಎಂದು ಗಂಭೀರದಿಂದ ನುಡಿದನು. ನೀವು ಯಾರು….?
ಅಯ್ಯಾ ತಮಗೆ ಕೇಮರ ಬಲ್ಲಾಳನಿಂದ ಒದಗಿದ ಮೋಸವನ್ನು ಕೇಳಿ ಮಧ್ಯಸ್ಥಿಕೆಯಿಂದ ಕರೆದು ಕೊಂಡು ಬರಲು ಎಣ್ಮೂರು ಬಲ್ಲಾಳರು ಕಳುಹಿಸಿದ ಜನ ನಾವು ತಮ್ಮ ಸಮಾಚಾರವನ್ನು ಮೊದಲೇ ಕೇಳಿದ್ದೇವೆ.
ಕೋಟಿ – ನಮ್ಮ ಸುದ್ದಿಯನ್ನು ಯಾರು ಹೇಳಿದರು.
ಕಿನ್ನಿ ಚೆನ್ನಯ – ತಮ್ಮ ಸಾಕು ತಾಯಿ ಸಾಯನ ಬೈದೆತಿ
ಕೋಟಿ – ಅದು ಹೇಗೆ? ಪಡಿಮಲೆಯಲ್ಲಿರುವ ಅವಳಿಂದ ಗೊತ್ತಾಗಲು ಸಾಧ್ಯವಿಲ್ಲವಲ್ಲ
ಕಿನ್ನಿ ಚೆನ್ನಯ – ಸಾಯನ ಬೈದೆತಿ ಎಣ್ಮೂರು ಸೇರಿ ಕೊಂಡು ಬಹು ಕಾಲವಾಗಿದೆ. ಅವಳು ನಿಮ್ಮನ್ನು ಕಣ್ಣು ತುಂಬ ನೋಡಬೇಕೆಂದು ಹಂಬಲಿಸಿ ಹಂಬಲಿಸಿ ಹಾಸಿಗೆ ಹಿಡಿದಿದ್ದಾಳೆ.
ಕೋಟಿ – ಅವಳು ಎಲ್ಲಿದ್ದಾಳೆ
ಕಿನ್ನಿ ಚೆನ್ನಯ – ಅಯ್ಯಾನೂರಿನ ತಿಮ್ಮಣ್ಣ ಬೈದ್ಯನಲ್ಲಿ
ಕೋಟಿ – ಅವಳ ಸ್ಥಿತಿ ಹೇಗಿದೆ
ಕಿನ್ನಿ ಚೆನ್ನಯ – ನಿನ್ನೆ ಅವಳ ಜೀವದಾಸೆ ಬಿಟ್ಟು, ಬಾಯಿಗೆ ಹಾಲೆರೆದಿದ್ದರು. ಇಂದಿನ ಸ್ಥಿತಿ ನನಗೆ ಗೊತ್ತಿಲ್ಲ. ಇಷ್ಟು ಮಾತುಕತೆಯಾದ ಬಳಿಕ ಕಿನ್ನಿ ಚೆನ್ನಯನ ಜೊತೆಯಲ್ಲಿ ತಿಮ್ಮಣ್ಣ ಬೈದ್ಯನ ಮನೆಗೆ ನಡೆದರು. ಆ ಮನೆಯ ಚಾವಡಿಯಲ್ಲಿ ಒಂದು ಹರಳೆಣ್ಣೆಯ ದೀಪ ಉರಿಯುತ್ತಿತ್ತು. ಆರುವತ್ತು ವರ್ಷ ಮೀರಿದ ಸಾಯನ ಬೈದೆತಿ ಚಾಪೆಯ ಮೇಲೆ ಮಲಗಿದ್ದಳು. ಜ್ವರದಿಂದ ಮೈ ಸುಡುತ್ತಿತ್ತು. ಕಿನ್ನಿ ಚೆನ್ನಯ ಚಾಪೆಯ ಹತ್ತಿರ ಬಂದು ಕುಳಿತುಕೊಂಡು ಅಮ್ಮಾ ಈ ಹೊತ್ತು ಹೇಗಿದೆ. ಕೋಟಿ ಚೆನ್ನಯರು ಬಂದಿದ್ದಾರೆ ಎಂದು ಹೇಳಿದನು.
ಈ ಎರಡು ಹೆಸರು ಕೇಳುತ್ತಲೇ ಅವಳ ಮುಚ್ಚಿದ ಕಣ್ಣು ತೆರೆಯಿತು. ಬಿಗಿದಿದ್ದ ತುಟಿ ಬಿರಿಯಿತು ಓ ನನ್ನ ಮಕ್ಕಳೇ ಎಂಬ ಮಾತು ಬಾಯಿಂದ ಹೊರಟವು. ಆಗ ಕೋಟಿಯು ತಾಯಿಯ ತಲೆಯನ್ನು ತನ್ನ ಎಡ ತೊಡೆಯ ಮೇಲೆ ಇಟ್ಟು ಕೊಂಡನು. ಚೆನ್ನಯ ಅವಳ ಕಾಲುಗಳನ್ನು ಹಿಡಿದು ಒತ್ತ ತೊಡಗಿದನು.
ಸಾಯನ ಬೈದೆತಿಯು ಬಹಳ ಆಯಾಸದಿಂದ ಮಕ್ಕಳೇ! ನನ್ನ ಕಡೆಕಾಲಕ್ಕೆ ನನಗೆ ಒದಗಿದಿರಿ ಎಂದಳು ಬಾಯಿತೆರೆದು. ಕೋಟಿ ಚೆನ್ನಯರು ತುಳಸಿ ದಳ ಗಂಗೋಧಕವನ್ನು ಅವಳ ಬಾಯಿಗಿಟ್ಟು ಅವಲ ಕಾಲುಗಳ ಮೇಲೆ ತಮ್ಮ ತಲೆಯಿಟ್ಟು ಅಣ್ಣೀರಿನಿಂದ ಅವಳ ಪಾದ ತೊಳೆದರು. ಸಾಯನ ಬೈದೆತಿಯು ಮಕ್ಕಳನ್ನು ನೋಡುತ್ತಿದ್ದಂತೆಯೇ ಪರಲೋಕ ಯಾತ್ರೆ ಮಾಡಿದಳು.
ಕಿನ್ನಿ ಚೆನ್ನಯನು ಬಲ್ಲಾಳರಿಗೆ ಎಲ್ಲಾ ವಿಷಯ ತಳಿಸಿದನು. ಸಾಯನ ಬೈದೆತಿಯ ಶುದ್ಧ ಕಾರ್ಯದ ಮೇಲೆ ಇಲ್ಲಿಗೆ ಕರೆದು ಕೊಂಡು ಬರುವುದಾಗಿಯೂ ಹೇಳಿದನು.
ಟಿಪ್ಪಣಿ : ಎಣ್ಮೂರು ಪಂಜದ ಗಡಿಕಲ್ಲನ್ನು ಕೋಟಿ ಚೆನ್ನಯ ಇದ್ದಲ್ಲಿಗೆ ಹಾಕಿದರೆಂಬ ಪಾಡ್ದನ ಕತೆಯಿದ್ದರೂ ಇಲ್ಲಿ ಹಲವು ಸಂಶಯಗಳು ಕಂಡು ಬರುತ್ತವೆ. ಕೋಟಿ ಚೆನ್ನಯರು ಸರಿ ಮಾಡಿದ ಕಲ್ಲನ್ನು ಗಡಿ ಪ್ರದೇಶದ ಕೋಟಿ ಚೆನ್ನಯರ ಅರಿವಿಗೆ ಬಾರೆದೆಯೂ ಇರಬಹುದು. ಈಗ ಗಡಿ ಕಲ್ಲೂ ಪಂಜ ಎಣ್ಮೂರಿನ ಗಡಿಯಾಗಿ ಕಾಣಿಸುತ್ತಿಲ್ಲಾ. ಮಚ್ಚಿಲ ಮಾರ್ಗದ ಬದಿಯಲ್ಲಿರುವ ಈ ಕಲ್ಲು ಮತ್ತೂ ಮುಂದಕ್ಕೆ ಹೋಗಬೇಕಿತ್ತು. ಕರ್ತಿ ಕಾಯರ್ (ಕಡಿದ ಕಾಸರಕನ ಮರ) ಎಂಬ ಸ್ಥಳವೇ ನಿಜವಾದ ಗಡಿ ಸ್ಥಳ. ಈ ಗಡಿಕಲ್ಲು ಇರುವ ಸ್ಥಳದಿಂದ ಸುಮಾರು 200 ಮೀಟರಿನಷ್ಟು ದೂರದಲ್ಲಿ ಕಡ್ತಿಕಾಯರು ಇದೆ. ಈಗಿನ ಗಡಿಕಲ್ಲು ಪ್ರಕಾರ ಅಯ್ಯಾನೂರಿನ ಮಹಾ ವಿಷ್ಣು ದೇವಾಸ್ಥಾನ ಮತ್ತು ಸುತ್ತಲಿನ ಪ್ರದೇಶ ಎಣ್ಮೂರಿನ ಹೊರಗೆ ಇದ್ದ ಹಾಗೆ ಕಂಡು ಬರುತ್ತದೆ. ಈ ಗಡಿಕಲ್ಲು ಈಗಲೂ ಇದ್ದು, ಮಾನವನ ಧಾಳಿಗೆ ಈಡಾಗಿದೆ. ಮಾರ್ಗದ ಬದಿಯಲ್ಲಿ ಇದ್ದ ಈ ಕಲ್ಲೂ ಅಪಾಯವೆಂದು ಮಾರ್ಗದವರು ಕಲ್ಲನ್ನು ಕಿತ್ತು ಬಿಸಾಡಲು ಕಲ್ಲಿನ ಸುತ್ತ ಅಗೆದರು. ಬುಡ ಸಿಗಲಿಲ್ಲ. ಕಲ್ಲಿಗೆ ಕಬ್ಬಿಣದ ಸುತ್ತಿಗೆಯಿಂದ ಬಡಿದರು ಸುತ್ತಿಗೆಯ ಪಟ್ಟಿಗೆ ಸಣ್ಣ ಸಣ್ಣ ತುಂಡುಗಳು ಮಾತ್ರ ಎದ್ದೂ ಬಂದವು. ಎಷ್ಟು ಹೊಡೆದರೂ ಕಲ್ಲೂ ಜಗ್ಗಲಿಲ್ಲ. ಅಚಲವಾಗಿಯೇ ಉಳಿಯಿತು. ಸೋತ ಕೆಲಸದವರು ಕಲ್ಲನ್ನು ಹಾಗೆಯೇ ಬಿಟ್ಟರು. ಈಗ ಪರೀಕ್ಷಿಸಿ ನೋಡಿದಾಗ ಕಲ್ಲಿನ ಮೇಲ್ಗಡೆಯಲ್ಲೂ ಸಣ್ಣ ತುಂಡುಗಳು ಮಾತ್ರ ಕಳಚಿ ಕೊಂಡಂತೆ ಕಂಡು ಬರುವುದು.