ಬೇಟೆಯ ಮಾರನೆಯ ದಿನ ಪಂಜದ ಬಲ್ಲಾಳನು ಎಣ್ಮೂರು ಬಲ್ಲಾಳನಿಗೆ ಓಲೆ ಕಳಿಹಿಸಿದನು. ನಿಮ್ಮ ಆಳುಗಳು ನಮ್ಮ ಕಾಡಿನೊಳಗೆ ನುಗ್ಗಿ ಅಕ್ರಮವಾಗಿ ಬೇಟೆಯಾಡಿ ಕಾಡು ಹಂದಿಯನ್ನು ಹೊಡೆದು ಸಾಗಿಸಿದ್ದಲ್ಲದೆ, ಪಂಜದ ಆಳುಗಳನ್ನು ಹೀನಾಯವಾಗಿ ಅಪಮಾನಗೊಳಿಸಿದ್ದಾರೆ. ಈ ತಪ್ಪಿಗೆ ಹಂದಿಯ ತಲೆ, ಬಾಲ, ಪಾರೆ, ರೋಮ ಸಹಿತ ತಂದೊಪ್ಪಿಸಬೇಕು. ಇಲ್ಲಾವಾದರೆ ಬಲ್ಲಾಳರು ರವಕೆ ಹಾಕಿ ಸೀರೆ ಉಟ್ಟು ಮದುಮಗಳಂತೆ ಶೃಂಗರಿಸಿ ಸಿದ್ಧತೆಯಲ್ಲಿರಲಿ ಮದುಮಗನಾಗಿ ಬರುತ್ತೇನೆ. ಎಂದು ಸೇನವ ಓದುವಷ್ಟರಲ್ಲಿ – ಮಂಜುಪೆರ್ಗಡೆಯು ಎದ್ದು ಓಲೆ ಕಾರನ್ನು ಹಿಡಿದು ತಲೆ ಬೋಳಿಸಿ ಹಣೆಗೆ ಮೂರು ನಾಮ ಹಾಕಿಸಿ ಓಲೆಯ ತುದಿತಲೆ ಕತ್ತರಿಸಿ ಓಲೆಕಾರನ ಕುತ್ತಿಗೆಗೆ ಕಟ್ಟಿ ಓಡಿಸಿದನು.
ಚೆನ್ನಯ ಪಂಜದ ಗಡಿಯಿಂದ ಹಂದಿ ಎಳಳೆದುತಂದು ಹಾಕಿದ ಸ್ಥಳ,
ಕಡ್ತಿಕಾಯರ್ (ಕರಿಕಳ)
ಟಿಪ್ಪಣಿ : ತುಪ್ಪೆ ಕಾಡು ಪಂಜದ ಬಲ್ಲಾಳರ ಪ್ರದೇಶ. ಈ ಕಾಡಿಗೆ ಈಗ ಕರಿಕಳ ಕಾಡೆಂದು ಕರೆಯುತ್ತಾರೆ. ಕರಿಕಳ ಕಾಡಿನ ನೆತ್ತಿಯೇ ಹಂದಿ ಬಿದ್ದ ಸ್ಥಳವಾಗಿರಬಹುದು. ಹಂದಿ ಬಿದ್ದ ಸ್ಥಳದ ಪಶ್ಚಿಮಕ್ಕೆ ಮುಚ್ಚಿಲದ ಮಾರ್ಗದ ಬದಿಯಲ್ಲಿ ಗಡಿಕಲ್ಲು ಈಗಲು ಇದೆ. ಚೆನ್ನಯನಿಗೆ ಇಳಿಜಾರಶಗಿದ್ದುದರಿಂದ ಹಂದಿ ಎಳೆಯಲು ಸುಲಭವಾಗಿರಬಹುದು. ಚೆನ್ನಯ ಕೋಪದಿಂದ ಇರಿದ ಮರ ಇತ್ತೀಚಿನವರೆಗೆ ಇತ್ತು. ಮಾರ್ಗದ ಬದಿಯ ಮರವಾದುದ್ದರಿಂದ ಸರಕಾರವೇ ಈ ಮರವನ್ನು ಕಡಿಸಿದೆ. ಅದರೆ ಈಗ ಅದೇ ಸ್ಥಳದಲ್ಲಿ ಇನ್ನೊಂದು ಮರ ಹುಟ್ಟು ಬೆಳೆಯುತ್ತಾ ಇದೆ.
ಕೋಟಿ ಚೆನ್ನಯರು ಎದ್ದು ನಿಂತು ಸುರಿಯ ಎತ್ತಿ ನಾವು ಎಣಿಸಿದ್ದು ಈಗ ನಮ್ಮ ಎದುರಿಗೆ ಬಂದು ನಿಂತಿದೆ. ಯುದ್ಧ ಜಯಿಸಿ ಕೊಡುತ್ತೇವೆ. ಬಲ್ಲಾಳರಿಗೆ ಧೈರ್ಯ ಹೇಳಿದರು.
ಮರುದಿನದಿಂದಲೇ ಯುದ್ಧ ತಯಾರಿಯಾಯಿತು. ಅತ್ತ ಚೆಂದುಗಿಡಿ ಸ್ವತಹ ಪಡುಮಲೆಗೆ ಪಯಣ ಮಾಡಿದ. ಪಡಿಮಲೆ ಬಲ್ಲಾಳರು ಕೋಟಿ ಚೆನ್ನಯರನ್ನು ಮರೆತು ಹಾಯಾಗಿದ್ದರು. ಚೆಂದುಗಿಡಿ ಪಡುಮಲೆ ಬಲ್ಲಾಳರು ಕಳುಹಿಸಿದ ಪತ್ರದ ಪ್ರಸ್ತಾಪ ಮಾಡಿ ನಾವು ಕೋಟಿ ಚೆನ್ನಯರನ್ನು ಹಿಡಿಯುವ ಸಾಹಸಕ್ಕೆ ಹೋಗಿ ಸೋತಿದ್ದೇವೆ. ಈಗ ಯುದ್ಧ ಎದುರಾಗಿದೆ. ನಿಮ್ಮಿಂದಾಗಿ ಪ್ರಾರಂಭವಾದ ಯುದ್ಧಕ್ಕೆ ತಮ್ಮ ಬಂಟರನ್ನು ಕರೆದುಕೊಂಡು ಬರಬೇಕೆಂದು ಕೇಳಿಕೊಂಡನು. ಬಲ್ಲಾಳರು ಕ್ರೋಧ ಮತ್ತರಾಗುವಂತೆ ಕೋಟಿ ಚೆನ್ನಯರ ಬಗೆಗೆ ಉಪ್ಪು ಖಾರ ಸೇರಿಸಿ ಬಲ್ಲಾಳರ ತಲೆಗೆ ತುಂಬಿಸಿದನು. ಇಬ್ಬರಲ್ಲೂ ಒಡಬಂಡಿಕೆಯಾಗಿ ದಿನ ನಿಶ್ಚೈಸಿ ಪಂಜದ ಸಹಾಯಕ್ಕೆ ಬರುವುದಾಗಿ ಪಡುಮಲೆ ಬಲ್ಲಾಳ ತಿಳಿಸಿದ. ಇದರಿಂದಾಗಿ ಪಡುಮಲೆಗೂ ಪಂಜಕ್ಕೂ ಸಂಪರ್ಕ ಹೆಚ್ಚಾಯಿತು. ಆತ್ತಿಂದಿತ್ತ ಓಲೆಗಳು ಸಾಗುತ್ತಲೇ ಇದ್ದವು.
ಪಂಜ ಮತ್ತು ಪಡುಮಲೆಯ ಸಾವಿರ ಆಳುಗಳು ದಂಡು ಸಿದ್ಧವಾಗಿ ಮೂರು ಕಡೆಗಳಿಂದ ದಾಳಿ ಮಾಡಿದರು. ಪಡುಗಡೆಯಿಂದ ಪರುಮಾಳು ಬಲ್ಲಾಳರ ದಾಳಿಯಾದರೆ, ಮೂಡು ಕಡೆಯ ಅಯ್ಯನೂರಿನ ಮಹಾವಿಷ್ಣು ದೇವಸ್ಥಾನದ ಕಡೆಯಿಂದ ಚೆಂದುಗಿಡಿ ಇಳಿದನು. ಕೇಮರ ಬಲ್ಲಾಳ ಸ್ವತಃ ತನ್ನ ನಂಬಿಗಸ್ಥ ಬಂಟರೊಡಗೂಡಿ ದಕ್ಷಿಣ ದಿಕ್ಕಿನಿಂದ ಇಳಿದನು.
ಎಣ್ಮೂರಿನ ಓಲಗ ಚಾವಡಿಯಲ್ಲಿ ದೇವ ಬಲ್ಲಾಳರು ಮಂಜು ಪೆರ್ಗಡೆಗೆ ರಣ ವೀಳ್ಯ ಕೊಡಿಸಿದರು. ಮಂಜು ಪೆರ್ಗಡೆ ತನ್ನ ಮೂನ್ನೂರಾಳುಗಳನ್ನು ಮೂರು ವಿಭಾಗ ಮಾಡಿ ಪಡುಗಡೆಯಿಂದ ಬಂದವರನ್ನು ಎದುರಿಸುವುದಕ್ಕೆ ರುಕ್ಮ ಬಲ್ಲಾಳನನ್ನು ಬಿಟ್ಟು ತೆಂಕು ಕಡೆಯಿಂದ ಇಳಿದವರನ್ನು ಎದುರಿಸುವುದಕ್ಕೆ ಕೋಟಿ ಚೆನ್ನಯರನ್ನು ನಿಲ್ಲಿಸಿ ಮೂಡುಗಡೆಯಿಂದ ಬರುವವರನ್ನು ಎದುರಿಸುವುದಕ್ಕೆ ಸ್ವತಃ ತಾನೇ ಮುಂದಾದನು.
ಪಡುಗಡೆಯ ಪೆರುಮಾಳು ಬಲ್ಲಾಳನ ಸೈನ್ಯವನ್ನು ರುಕ್ಮ ಬಲ್ಲಾಳನು ಪರಿಣಾಮಕಾರಿಯಾಗಿ ಎದುರಿಸಿ ಅನೇಕರನ್ನು ಬಲಿಕೊಟ್ಟು ಮುಂದೆ ಬರದಂತೆ ತಡೆ ಒಡ್ಡಿದನು. ತೆಂಕಿ ಕಡೆಯಿಂದ ಕೇಮರ ಬಲ್ಲಾಳ ಕುದುರೆಯೇರಿ ತನ್ನ ಸೈನ್ಯ ನುಗ್ಗಿಸಿದ. ಕೋಟಿ ಚೆನ್ನಯರು ತಮ್ಮ ಕಡೆಗೆ ಸಾವು ನೋವುವಿಲ್ಲದೆ ಪಂಜದ ಅನೇಕರನ್ನು ಕತ್ತರಿಸಿ ಹಾಕಿದರು. ಕೇಮರ ಬಲ್ಲಾಳನ ಶತಪ್ರಯತ್ನ ಫಲಕಾರಿಯಾಗದೆ ಒದ್ದಾಡುತ್ತಿದ್ದಾಗ, ಬಲ್ಲಾಳ ಏರಿದ ಕುದುರೆಯ ಕಣ್ಣಿಗೆ ಬಲವಾದ ಒಂದು ಬಾಣವು ತಾಗಿ ಕುದುರೆ ಮುಗ್ಗರಿಸಿ ಬಿದ್ದುಬಿಟ್ಟಿತು. ಕುದುರೆಯಿಂದ ಬಲ್ಲಾಳನು ಕೆಳಗೆ ಬಿದ್ದು ಬಿಟ್ಟನು. ಎದ್ದವನು ಕೋಟಿ ಚೆನ್ನಯರ ಕೈ ಚಲಕ ಧೈರ್ಯ ಸಾಹಸಕ್ಕೆ ಬೆರಗಾಗುತ್ತಾನೆ. ಅಪೊರ್ವ ದೇಹ ದಾಡ್ರ್ಯತೆಗೆ ಮೆಚ್ಚುತ್ತಾನೆ. ಇವರಂತಹ ಕಲಿ ಪುರುಷರನ್ನು ನಾನು ಮೊದಲಾಗಿ ನೋಡದೆ ತಪ್ಪು ಮಾಡಿದ್ದೇನೆ. ಇವರನ್ನೂ ಕಂಡಿರುತ್ತಿದ್ದರೆ ಈ ಯುದ್ಧ ಖಂಡಿತ ಆಗುತಿರಲಿಲ್ಲ. ನನ್ನ ಬೀಡಿನ ಬಂಟರಾಗುತ್ತಿದ್ದರೆ ಇಂದು ಚೆಂದುಗಿಡಿ ಬೇಕಾಗಿರಲಿಲ್ಲ. ಇವರನ್ನು ಕಂಡರೆ ಚೆಂದುಗಿಡಿ ಹೊರಗೆ ನಿಲ್ಲಬೇಕಿತ್ತು. ಕೋಟಿ ಚೆನ್ನಯರಿಗೆ ನನ್ನ ಬೀಡಿನಲ್ಲಿ ಸ್ಥಾನಮಾನ ಸಿಕ್ಕುತ್ತಿತ್ತು. ಬೇಟೆಯ ಸಂದರ್ಭ ಕೋಟಿ ಚೆನ್ನಯರ ಪೌರುಷ ನನ್ನ ಒಡಲಿಗೆ ಬಂದಿತ್ತು. ಈ ಸಂದರ್ಭವೂ ಚೆಂದುಗಿಡಿ ನನ್ನ ಮನಸ್ಸಿಗೆ ಮಂಕು ಬೂದಿ ಎರಚಿ, ನನ್ನನು ಬದಲಿಸಿ ಕೊಂಡ. ಗುಗ್ಗುರು ಮಾಳ್ಯ ಅಂದು ಒಡೆದದ್ದೆ ಒಂದು ಸಾಹಸ. ಆಗ ಇವರ ಪೌರುಷ ನನ್ನ ತಲೆಗೆ ಬಾರದ ಹಾಗಾಯಿತು. ಚೆಂದುಗಿಡಿ ತನ್ನ ಸ್ವಾರ್ಥ ಸಾಧನೆಗಾಗಿ ತಂತ್ರ ರೂಪಿಸಿದ. ಇವರನ್ನು ಎದಿರಿಸಲು ಮುಕ್ಕಣನೇ ಬರಬೇಕಷ್ಟೇ ಎಂದು ಅನೇಕ ಸತ್ಯ ಸಂಗತಿಗಳು ಕೇಮರ ಬಲ್ಲಾಳರ ತಲೆಗೆ ತೇಲಿ ತೇಲಿ ಬರಲಾರಂಭಿಸಿತು. ಚೆಂದುಗಿಡಿ ತನ್ನ ಕಲೆಗೆ ಬಿತ್ತಿದ ವಿಷ ಬೀಜ ಅವನ ಎದೆಗೆ ತಾಗಲಿ ಎಂದುಕೊಂಡವನು ತನ್ನ ಉಳಿದ ಬಂಡರನ್ನು ಹಿಂದೆ ಕರೆದು ಅವರ ರಕ್ಷಣೆಯೊಂದಿಗೆ ಪಂಜಕ್ಕೆ ರಣರಂಗ ಬಿಟ್ಟು ಪಲಾಯನ ಮಾಡಿದ.
ಅಯ್ಯನೂರು ವಿಷ್ಣು ದೇಗುಲದ ಬಳಿಯಲ್ಲಿ ಚೆಂದುಗಿಡಿಗೂ ಮಂಜು ಪೆರ್ಗಡೆಗೂ ಘನಘೋರ ಕಾಳಗ ನಡೆಯುತ್ತಿತ್ತು. ಚೆಂದುಗಿಡಿ ಮೋಸದ ಬಲೆ ಬೀಸಲಾರಂಬಿಸಿದ. ಚೆಂದಗಿಡಿಯ ಜಾಲ ಫಲ ಕೊಟ್ಟಿತು. ಮಂಜು ಪೆರ್ಗಡೆ ವೀರ ಮರಣ ಪಡೆದು ಅಮರವಾದ. ಈಗ ಚೆಂದುಗಿಡಿಯ ದುರಂಹಕಾರ ಜಾಸ್ತಿಯಾಯಿತು. ಯುದ್ಧ ತಂತ್ರವಾಗಿ ಮುಂದೂತ್ತುವುದು ಸರಿಯಲ್ಲವೆಂದು ಮುಂದೆ ಬರಬೇಕಾಗಿದ್ದ ಕೋಟಿ ಚೆನ್ನಯರಿಗಾಗಿ ತಂತ್ರ ರೂಪದಲ್ಲಿ ಕಾದು ಕುಳಿತ.
ತೆಂಕು ಕಡೆಯಲ್ಲಿ ಕೇಮರ ಬಲ್ಲಾಳನನ್ನು ಓಡಿಸಿ ಕೋಟಿ ಚೆನ್ನಯರು ಬೀಡಿನ ಬಾಗಿಲಿಗೆ ಬಂದಾಗ ಮೂಡು ಕಡೆಯಿಂದ ಯುದ್ಧಾಳುಗಳು ಈಡಿ ಬರುವುದು ಕಾಣಿಸಿತು. ಮಂಜು ಪೆರ್ಗಡೆಯ ಸಾವಿನ ಸುದ್ಧಿ ತಿಳಿದುಬಂತು. ಕೂಡಲೇ ಆ ಕಡೆಗೆ ಧಾಮಿಸಿದರು. ಓಡುವವರಿಗೆ ಧೈರ್ಯ ಹೇಳಿ ತಿರುಗಿಸಿದರು. ಕತ್ತಿ ಝಳಪಿಸುತ್ತಾ ಮುಂದೆ ಮುಂದೆ ನಡೆದರು. ಮಹಾವಿಷ್ಣು ದೇವಸ್ಥಾನದ ಪಕ್ಕಕ್ಕೆ ಬಂದಾಗ ಸುತ್ತ ಮುತ್ತಲಿಂದ ಸುಮಾರು ಮುನ್ನೂರು ಮಂದಿ ಕೋಟಿ ಚೆನ್ನಯರನ್ನು ಮುತ್ತಿದರು. ಯುದ್ಧ ಬಿರುಸುಗೊಂಡಿತು. ಹೆಣಗಳ ರಾಶಿ ರಾಶಿಯಾಗಿ ಬೀಳಲು ಪ್ರಾರಂಭವಾಯಿತು. ಆಕ್ರಂದನ, ನರಳಾಟಗಳು ಹೆಚ್ಚಾದವು. ಅದರೆ ಯುದ್ಧ ಯಥಾವತ್ತಾಗಿ ನಡೆಯುತ್ತಲೇ ಇತ್ತು. ದೂರದಿಂದ ನೋಡುವವರ ಕಣ್ಣಿಗೆ ಕೋಟಿ ಚೆನ್ನಯರು ನೆಲ ಹಿಡಿದರೆಂದು ಕಂಡರೂ ಕೋಟಿ ಚೆನ್ನಯರು ಬೆನ್ನಿಗೆ ಬೆನ್ನು ಕೊಟ್ಟು ಮಾಡುತ್ತಿದ್ದ ಯುದ್ಧದಲ್ಲಿ ಹೆಣವಾಗಿ ಬೀಳುತ್ತಿದ್ದವರು ಪಂಜದವರೇ ಆಗಿದ್ದರು. ಕೋಟಿ ಚೆನ್ನಯರ ಪೆಟ್ಟು ತಿಂದತಹ ಚೆಂದುಗಿಡಿ ತನ್ನ ಸೈನ್ಯ ಹಿಂದೆ ಕರೆಸಿದ. ಇದು ಕೋಟಿ ಚೆನ್ನಯರಿಗೆ ವರ ಪ್ರಸಾದವಾಯಿತು. ದಣಿದಿದ್ದ ದೇಹಕ್ಕೆ ಅಲ್ಪವಾದರೂ ವಿಶ್ರಾಂತಿ ಬೇಕಿತ್ತು. ಅದು ದೊರಕಿದ ಹಾಗಾಯಿತು.
ಈಗ ಚೆಂದುಗಿಡಿಗೆ ದಿಗಿಲಾಗಿ ಓಡಿ ಹೋಗೋಣವೇ ಮಾರ್ಯದೆಗೆ ಕುಂದು. ಕಾದಲು ಇಬ್ಬರ ಮುಂದೆ ಹೋಗೋಣವೇ…… ಬದುಕುವ ಹಾಗಿಲ್ಲ. ಇವರಿಬ್ಬರೂ ಒಟ್ಟಿಗೆ ಇದ್ದರೆ ನೀಲಕಂಠನೂ ಎದುರಿಸಲಾರ, ಉಪಾಯದಿಂದ ಅಪಾಯದಿಂದ ಪಾರಾಗಲು ಇವರಿಬ್ಬರನ್ನೂ ಬೇರೆ ಬೇರೆ ಮಾಡಲೇಬೇಕು. ಈ ಹೊತ್ತಿಗೆ ಪಡುಗಡೆಯಲ್ಲಿ ಕಾದಾಡುತ್ತಿದ್ದ ಪಡುಮಲೆ ಬಲ್ಲಾಳನು ಈ ನಿಣರ್ಾಯಕ ಕೇಂದ್ರಕ್ಕೆ ಬಂದ, ಚೆಂದುಗಿಡಿ ಕರೆಸಿರಲೂ ಸಾಕು. ಈ ಇಬ್ಬರೂ ಸಮಾಲೋಚಿಸಿ, ಉಳಿದಿದ್ದ ಬಂಡರನ್ನು ಇಬ್ಬಾಗ ಮಾಡಿ ಕೋಟಿ ಚೆನ್ನಯರನ್ನು ಕೆಣಕಲು ಪ್ರಾರಂಭಿಸಿದರು. ಕಾದಾಟ ಪ್ರಾರಂಭವಾಯಿತು. ಈಗಿನ ಬಯಲಾಟದ ಜೋಡಾಟದಂತೆ!
ಪಡುಮಲೆ ಬಲ್ಲಾಳ ನೇರಹೋಗಿ ಕೋಟಿಯ ಮುಂದೆ ನಿಂತನು. ಪಡುಮಲೆ ಬಲ್ಲಾಳನನ್ನು ಕಂಡ ಕೋಟಿಯು ಆಯುಧ ಕೆಳಗಿರಿಸಿ, ಎರಡು ಕೈಗಳನ್ನು ಜೋಡಿಸಿ ಬಗ್ಗಿ ವಂದಿಸಿದ. ಮರುವಂದಿಸಬೇಕಾಗಿದ್ದ ಬಲ್ಲಾಳ ನಿರೀಕ್ಷೆಯಂತೆ ಒದಗಿದ ಸಂದರ್ಭಕ್ಕೆ ಬಿಲ್ಲಿಗೆ ಬಾಣ ಜೋಡಿಸಿ ಕೋಟಿಯ ಮರ್ಮ ಸ್ಥಾನಕ್ಕೆ ಬಾಣ ಗುರುಯುಟ್ಟು ಹೊಡೆದೇ ಬಿಟ್ಟ. ಬಲ್ಲಾಳರೇ ಮೋಸ ಮೋಸ ಎಂದ ಕೋಟಿಯು ಉರುಳಿಬಿಟ್ಟ. ಕೋಟಿಯ ಆಟ ಮುಗಿಯಿತೆಂದು ತಿಳಿದ ಪಂಜದ ಬಂಟರು ಚೆನ್ನಯನ ಕಡೆಗೆ ಧುಮಿಕಿದರು ಚೆನ್ನಯ ವೈರಿ ಪಡೆಯನ್ನು ಕತ್ತರಿಸುತ್ತಲೇ ಸಾಗುತ್ತಿದ್ದ. ಚೆಂದುಗಿಡಿ ಕಾದಾಡುತ್ತಿದ್ದ ಚೆನ್ನಯನ ಹಿಂದುಗಡೆಯಿಂದ ಕಳ್ಳ ಹೆಜ್ಜೆ ಇಡುತ್ತಾ ಕತ್ತಿ ಹಿಡಿದು ಕಡಿಯಲು ಹೊಂಚು ಹಾಕುತ್ತಿದ್ದ. ಇನ್ನೇನು ಚೆನ್ನಯನನ್ನು ಕಡಿಯುವ ಗಳಿಗೆಗೆ ಬಂದಿದನು. ನೆಲೆಕುರುಳಿದ ಕೋಟಿ ಅತೀವ ವೇದನೆಯನ್ನು ಸಹಿಸಿಕೊಂಡು ಕತ್ತೆತ್ತಿ ನೋಡಿದವನು ಚೆನ್ನಯಾ…. ಹಿಂದೆ…. ಎಂದು ಹೇಳುವಷ್ಟರಲ್ಲಿ ಗಂಟಲು ಬಿಗಿಯಿತು, ನಾಲಗೆ ತಡವರಿಸಿತು. ಅಣ್ಣನ ಸ್ವರ ಕೇಳಿದ ಚೆನ್ನಯ ತಿರುಗಿದ. ಚೆಂದುಗಿಡಿ ಚೆನ್ನಯನನ್ನು ಕಂಡು ಬೆಚ್ಚಿ ಬಿದ್ದು ಒಂದಡಿಯಷ್ಟು ಹಿಂದೆ ಸರಿದ. ಚೆನ್ನಯನಿಗೆ ಬೇಕಾದವನೇ ಚೆಂದುಗಿಡಿ. ಚೆನ್ನಯನ ರೋಷ ಪರಮಾವಧಿ ರೇಖೆಯನ್ನು ದಾಟಿತು. ಭೀಮನ ಬಲವೇ ಉಂಟಾಯುತು. ಅಭಿಮನ್ಯುವಿನ ಸಾಹಸ ಒದಗಿತು. ಹನುಮಂತನಂತೆ ಕುಪ್ಪಳಿಸಿ ಹಾರಿದವನು ಹೂಂಕರಿಸಿ ಚೆಂದುಗಿಡಿಯ ತಲೆಗೇ ಬಲವಾಗಿ ಒದ್ದ. ಚೆಂದುಗಿಡಿ ಅಂಗಾತ ಬಿದ್ದ. ಅಲ್ಲಿಂದಲೇ ಚೆನ್ಯಯ ಹಿಡಿದೆತ್ತಿ ಮೂರು ಸುತ್ತು ತಿರುಗಿಸಿ ಗದ್ದೆ ಉಣಿಗೆ ಎಸೆದ. ಗದ್ದೆ ಹುಣಿಯ ಬಲವಾದ ಪಟ್ಟಿಗೆ ಬಾಯಿ ತೆರೆದವನು ನಾಲಗೆ ಕಚ್ಚಿಕೊಂಡು ಒದ್ದಾಡಿದ ತಣ್ಣಗಾಗಿ ಗದ್ದೆಯ ಹಸಿ ಮಣ್ಣಿಗೆ ಒತ್ತಾದ.
ಚೆಂದುಗಿಡಿ ಸತ್ತಿದೇ ತಡ, ಪಂಜದ ಪಡೆ ಪಲಾಯನ ಮಾಡಿತು. ಚೆನ್ನಯ ಅಣ್ಣನನ್ನು ನೋಡಿ, ಅಣ್ಣನ ಸೇವೆಯಲ್ಲಿ ನಿರತನಾದ, ಆ ಹೊತ್ತಿಗೆ ಎಣ್ಣೂರಿನ ಅನೇಕರು ಬಂದು ಸೇರಿದರು. ಬಲ್ಲಾಳರಿಗೆ ಜಯದ ಸುದ್ದಿ ಹೋಯಿತು. ಬಲ್ಲಾಳರು ವೀರ ಬೈದ್ಯರನ್ನು ಕರೆತರುವುದಕ್ಕೆ ಪಲ್ಲಕಿಯೊಡನೆ ಹೊರಟರು.
ಇತ್ತ ಕೋಟಿಯು ಅಚಿತಿಮ ಸ್ಥಿತಿಯಲ್ಲಿ ಒದ್ದಾಡುತ್ತಿದ್ದನು. ಆ ಹೊತ್ತಿಗೆ ಬಲ್ಲಾಳರು ಬಂದು ಸೇರಿಕೊಂಡರು. ಕೊಟಿ ಮಹಾವಿಷ್ಣು ದೇವಸ್ಥಾನದ ಎದುರು ಮಲಗಿಸಲು ಹೇಳಿದನು. ಹಾಗೆಯೇ ಮಹಾವಿಷ್ಣು ದೇವಸ್ಥಾನದ ಎದುರು ಮಲಗಿಸಿದರು. ಆ ಹೊತ್ತಿಗೆ ಮಧ್ಯಾಹ್ನದ ಪೊಜೆಯ ಗಂಟೆ ಬಾರಿಸಿತು. ಕೋಟಿ ದೇವರ ತೀರ್ಥಕ್ಕಾಗಿ ಕೈ ಸನ್ನೆ ಮಾಡಿದ. ಪೊಜೆಯ ಭಟ್ಟರು ತೀರ್ಥ ತಂದು ನಿಧಾನವಾಗಿ ಬಾಯಿಗೆ ಹೊಯ್ದರು. ತಮ್ಮನ ತೊಡೆಯಲ್ಲಿ ತಲೆ ಇಟ್ಟು ಮಲಗಿದ. ಕೋಟಿಯ ಕಣ್ಣಾಲಿಗಳು ತಿರುಗಲಾಂಭಿಸಿತು. ಚೆನ್ನಯ ಅಲ್ಲೇ ಇದ್ದ ತುಳಸಿ ನೀರನ್ನು ಕುಡಿಸಿದ. ಒಂದೆರಡು ಗುಟುಕು ನೀರು ಕತ್ತಿನಿಂದ ಇಳಿಯುವಷ್ಟರಲ್ಲಿ ಕಣ್ಣುಗಳು ಮುಚ್ಚಿಕೊಂಡು ತಲೆಯು ಚೆನ್ನಯನ ತೊಡೆಗೆ ಆತುಕೊಂಡಿತು. ಚೆನ್ನಯ ಅಲ್ಲಿಂದ ಎದ್ದವನು, ಒಟ್ಟಿಗೆ ಬಂದವರು ಒಟ್ಟಿಗೆ ಹೊಗಲೇಬೇಕೆಂದು ಕೊಂಡವನು ಅಲ್ಲೇ ಇದ್ದ ಬಾವಿಯ ಕಟ್ಟೆಯ ಕಲ್ಲಿಗೆ ತನ್ನ ತಲೆ ಬಡಿದುಕೊಂಡ. ಮೊದಲೇ ಗಾಯಗೊಂಡಿದ್ದ ತಲೆ ಒಡೆದು ಮಾಲೆಯಂತೆ ಮೆದುಳು ರಕ್ತದೊಡನೆ ಹೊರಬಿತ್ತು. ಪ್ರಾಣ ಪಕ್ಷಿ ನಿಲ್ಲಲಾರದೆ ಹಾರಿ ಹೋಯಿತು. ಬಲ್ಲಾಳರು ಅಯ್ಯೋ ನನ್ನ ಬೀಡನ್ನು ಉಳಿಸಿದ ವೀರರೇ ನಿಮ್ಮ ಉಪಕಾರವನ್ನು ಹೇಗೆ ಮರೆಯಲ್ಲಿ ಎಂದು ಕೊಂಡು ಅತ್ತರು. ನಿಮ್ಮ ಸಹಸದ ವಿಜಯಕ್ಕೆ ನನ್ನ ತಲೆ ಕಡಿದು ಮಣೆ ಮಾಡಿಕೊಟ್ಟರೂ ಸಾಲದು ಅಯ್ಯೋ! ಮದ್ದಾನೆಗಳೇ, ನನ್ನ ಪಲ್ಲಕಿಯಲ್ಲಿ ಜೀವಂತ ಕುಳಿತು ವಿಜಯಯಾತ್ರೆ ಮಾಡಬೆಕಾದ ನೀವು ಧರ್ಮಕ್ಕೆ ಜೀವನ ಬಿಡಬೇಕಾಯಿತಲ್ಲಾ ಎಂಧು ಗೋಳಾಡಿದರು.
ಅಷ್ಟು ಹೊತ್ತಿಗೆ ಅಲ್ಲೇ ನಿಂತಿದ್ದ ಪಡುಮಲೆ ಬಲ್ಲಾಳ ಅಯ್ಯೋ ನಾನೆಂತ ಪಾಪಿ! ನಾನು ಸಕಿಸಲಹಿದ ಮಕ್ಕಳನೇ ನನ್ನ ಕೈಯಾರೆ ಕೊಲ್ಲಿಸಿದ ನರಾಧಮ ನಾನಾದೆನಲ್ಲಾ?…… ಇನ್ನು ನಾನು ಬಾಳಬೇಕೆ? ಎಂದವನು ತನ್ನ ಕೈಯಲ್ಲಿ ಇದ್ದ ಸುರಿಯವನ್ನು ಎತ್ತಿ ತಿವಿದುಕೊಳ್ಳಲು ಮುಂದಾದರು. ದೇವ ಬಲ್ಲಾಳರು ತಡೆಯಿರಿ ತಡೆಯಿರಿ ಎಂದಾಗ, ಅಲ್ಲಿದ್ದ ಅನೇಕರು ಬಲ್ಲಾಳರಲ್ಲಿ ಇದ್ದ ಸುರಿಯವನ್ನು ಎಳೆದುಕೊಂಡರು.
ಕೋಟಿ ಚೆನ್ನಯರ ಮೃತದೇಹ ಇರಿಸಿದ ಮಂಜಲ್ಪಾದೆ
ಮುಂದೆ ಅಂತಿಮ ಕ್ರಿಯೆಯ ಪ್ರಸ್ತಾಪವಾಯಿತು. ಬಂಡರ ಯೋಗ್ಯತೆಗೆ ಸರಿಯಾಗಿ ಗುತ್ತಿನ ಬಂಟರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಬೇಕೆಂದು ಎಲ್ಲರ ಅಭಿಮತದ ಮೇರೆಗೆ ಗುತ್ತಿನ ಭೂಮಿಗೆ ಪಲ್ಲಕಿಯಲ್ಲಿ ಇಟ್ಟು ಮೃತದೇಹ ಸಾಗಿಸುವಾಗ ರುಕ್ಮ ಬಲ್ಲಾಳನ ಅರಮನೆಯ ಪಕ್ಕದ ಕಲ್ಲಿನ ಮೇಲೆ ಇಟ್ಟರು. ಆ ಕಲ್ಲಿನಿಂದ ಸಿಡಿದ ಸಣ್ಣ ಶಬ್ಬ ಕೇಳಿಸಿತು. ನೋಡುವಾಗ ಇಬ್ಬಾಗವಾಗಿತ್ತು. ಇದರಿಂದ ಅಣ್ಣ ತಂಮ್ಮಂದಿರ ಅಂತ್ಯ ಸಂಸ್ಕಾರ ಬೇರೆ ಬೇರೆ ಮಾಡಬೇಕೆಂಬ ಸೂಚನೆ ಸಿಕ್ಕಿ ಬೇರೆ ಬೇರೆಯಾಗಿ ಅಂತ್ಯ ಕ್ರಿಯೆ ಮಾಡಿಸಿದರು. ಮುಂದಿನ ಏಳರ ಕಾರ್ಯಕ್ರಮಗಳನ್ನು ಮುಗಿಸಿ ಒಂಭತ್ತನೇ ದಿನ ದೂಲಪ್ಪ ಮಾಡಿಸಿ ಅರಸು ಬಲ್ಲಾಳರಿಗೆ ಮಾಡುವ ವಿಧಾನದಲ್ಲಿ ಕೈ ಮಾಡ-ಪೂಮಾಡ-ನೆಲಯುಪ್ಪರಿಗೆ ಪೂಕಾರೆ ಮದ್ವೆ ವಗೈರೆ ಮಾಡಿಸಿ, ಎತ್ತು ಹೂಡಿಸಿ, ಹಣ ಬಿತ್ತಿಸಿದರು. ಎಣ್ಣೂರಿನ ಸಮಾಸ್ತ ಜನರಿಗೆ ಅಂತ್ಯ ಕ್ರಿಯೆಯ ಅಂಗವಾಗಿ ಊಟ ಹಾಕಿದರು.
ಅಲೌಕಿಕ ಪ್ರಪಂಚಕ್ಕೆ ಸೇರಿದ ಬಂಟರು ಕೆಮ್ಲಾಜೆ ಬ್ರಹ್ಮನ ಸ್ಥಾನಕ್ಕೆ ಹೋದಾಗ ದೇವರು ಹತ್ತಿರ ಬರಬೇಡಿ, ನೀವು ಮಾಡಿದ ಪಾಪಕ್ಕೆ ಮೂಡು ಗಂಗೆ ಬಡಗುಗಂಗೆ (ಕಾವೇರಿ, ನೇತ್ರಾವತಿ) ಯಲ್ಲಿ ಸ್ಥಾನ ಮಾಡಿ ಬರಬೇಕೆಂದು ಹೇಳಿದರು. ದೇವರ ಅಪ್ಪಣೆಯಂತೆ ಗಂಗಾವಳಿಕೆ ಹೋಗಿ ಹದಿನಾರು ತೀರ್ಥಗಳಲ್ಲಿಯೂ ಸ್ನಾನ ಮಾಡಿದರು. ಪುಣ್ಯ ಪಡೆಯುವುದಕ್ಕಾಗಿ ಇಪ್ಪತ್ತನಾಲ್ಕು ಕಡೆಯಿಂದ ತೀರ್ಥ ತಂದವರು. ತುಳುನಾಡಿನ ಎಲ್ಲಾ ಆದಿಮೂಲ ದೈವ ದೇವರ ದರ್ಶನ ಮಾಡಿ ಬಂದವರು! ನಾಗಬ್ರಹ್ಮರ ಬಲ ಭಾಗದಲ್ಲಿ ನೆಲೆಯಾಗಿ ನಿಂತು ನಾಗಬ್ರಹ್ಮರ ಓಲಗದ ಬಂಟೆರೆಂದು ಒಪ್ಪಿಕೊಂಡು ತಮ್ಮ ಪ್ರತಾಪಗಳನ್ನು ಮಹಿಮೆಯಿಂದ ತೋರಿಸಿಕೊಡಲು ಪ್ರಾರಂಭಿದರು. ಮೊದಲಾಗಿ ಧೈರ್ಯ ಸಾಹಸ ತೋರಿದ ಮಣ್ಣಾದ ಪುಣ್ಯ ಭೂಮಿ ಎಣ್ಣೂರಿನಲ್ಲಿಯೂ, ನೆಲೆಯಾಗಿರುತ್ತೇವೆಂದು ಗಂಗು ಅಜ್ಜಿಗೆ ಭಾಷೆ ಕೊಟ್ಟ ಕುಬಲಾಡಿ ಶೇಣಿಯಲ್ಲಿಯೂ, ಹುಟ್ಟಿ ಬೆಳೆದ ಪಡುಮಲೆ ಪುಣ್ಯ ನೆಲದಲ್ಲಿಯೂ ಸಂಚಾರ ಕೈಗೊಂಡು ಅರಸು ದೈವಗಳ ಬಂಟರಾಗಿ ನಾಗಬ್ರಹ್ಮನ ಕೃಪೆಯಿಂದ ನಂಬಿದವರ ಪಾಲಿಗೆ ಮಾರ್ಗದರ್ಶಕರಾದರು.