ಧರ್ಮಡ್ಕದಲ್ಲಿ ದಾರಿಹೋಗುವವರೆಗೆ ನೀರು ಕುಡಿಯುವ ವ್ಯವಸ್ಥೆಯಾಗಿ ಧರ್ಮನೀರಿನ ವ್ಯವಸ್ಥೆಯಿತ್ತು. ಇದರಿಂದಲೇ ಇಲ್ಲಿಗೆ ಧರ್ಮಡ್ಕ ಎಂಬ ಹೆಸರು ಬಂದಿರಬಹುದು. ಪಂಜ ಬಲ್ಲಾಳರು ಅರಮನೆಯ ಮಕ್ಕಳಿಗಾಗಿ ಮತ್ತು ಬ್ರಾಹ್ಮಣರು ಮಕ್ಕಳಿಗೆ ವಿದ್ಯೆ ಕಲಿಸುದಕ್ಕೆ ಇಲ್ಲಿ ಒಂದು ಗುರು ಪೀಠವನ್ನು ಸ್ಥಾಪಿಸಿದ್ದರು. ಈ ಬ್ರಾಹ್ಮಣರು ಪ್ರಸಿದ್ಧ ಜೋಯಿಸರಾಗಿದ್ದು ಮುಂದಿನ ಭವಿಷ್ಯವನ್ನು ಕರಾರುವಕ್ಕಾಗಿ ಹೇಳುತ್ತಿದ್ದರಂತೆ! ಇವರೇ ಧರ್ಮನೀರು ಕೊಡುತ್ತಿದ್ದಂತೆ ಕಂಡು ಬರುವುದು! ಪಂಜ ಬೀಡಿಗೆ ಹೋಗುವ ಮಾರ್ಗದಲ್ಲಿ ಧರ್ಮಡ್ಕದಿಂದ ಪಂಜ ಬೀಡಿನ ತನಕ ಆಲೋಚನೆ ಮಾಡಿದರೆ ರಾಜರು ಇಲ್ಲಿಗೆ ಬರುವ ಸಂದರ್ಭದಲ್ಲಿ ರಾಜರಕ್ಷಣೆಗಾಗಿ ನಿಲ್ಲಿಸುವ ಭಟರ ಸ್ಥಾನವಾಗಿರಬಹುದು. ಅಥವಾ ಗೌರವ ಕೊಡುವ ಸ್ಥಳವಾಗಿರಲೂ ಸಾಕು. ಹೇಗಿದ್ದರೂ ರಾಜದರ್ಬಾರಿನ ಸಂಕೇತವೆಂದು ಧಾರಾಳವಾಗಿ ನಂಬಬಹುದಾಗಿದೆ.
ಓಟೆ ಚಾರಿನಿಂದ ಹತ್ತಿ ಬಂದವರು ಧರ್ಮಡ್ಕದ ಬದಿಯ ಮರದ ಕೆಳಗೆ ಕುಳಿತು ವೀಳ್ಯ ಹಾಕಿದರು. ಚೆನ್ನಯನಿಗೆ ಅಡಿಕೆಯ ಅಮಲು ತಲೆಗೇರಿ ನೀರಿಗಾಗಿ ಚಪಡಿಸಿದ. ಇಬ್ಬರೂ ಮರದ ನೆರಳಿನಿಂದ ಎದ್ದವರು, ಅಡ್ಕದಲ್ಲಿ ಮುಂದೆವರಿಯುತ್ತಿದ್ದಾಗ ಅಡ್ಕದ ಮಧ್ಯೆ ಒಂದು ಮನೆ ಕಂಡಿತು. ಹತ್ತಿರದಲ್ಲಿಯೇ ಧರ್ಮನೀರು ಕಟ್ಟೆಯೂ ಕಂಡಿತು. ಧರ್ಮಕಟ್ಟೆಗೆ ಹೋಗಿ ನೀರು ಕೇಳಿದರು. ಶೂದ್ರರಿಗೆ ನೀರು ಕೊಡುವ ಪದ್ಧತಿ ಇಲ್ಲಿ ವಿಚಿತ್ರವಾಗಿತ್ತು. ಇಲ್ಲೊಂದು ಕಂಚಿನ ದಂಬೆ. ಬ್ರಾಹ್ಮಣರು ಕಂಚಿನ ದಂಬೆಗೆ ನೀರು ಹೊಯ್ಯುತ್ತಿದ್ದರು. ನೀರು ಕುಡಿಯುವವರು ಕಂಚಿನ ದಂಬೆಗೆ ಬಾಯಿ ಕೊಟ್ಟು ನೀರು ಕುಡಿಯಬೇಕಿತ್ತು. ಪದ್ಧತಿಯಂತೆ ಕೋಟಿ ಚೆನ್ನಯರಿಗೆ ಕಂಚಿನ ದಂಬೆಯ ಮೂಲಕ ಭಟ್ಟರು ನೀರು ಕುಡಿಯಲು ಹೇಳಿದಾಗ ಚೆನ್ನಯ ಸಾವಿರಾರು ಜನರು ಬಾಯಿ ಇಟ್ಟ ಕಂಚಿನ ದಂಬೆಯಲ್ಲಿ ನೀರು ಕುಡಿಯಲು ವಿರೋಧಿಸಿ ತನ್ನ ಸುರಿಯಕ್ಕೆ ನೀರು ಹೊಯ್ಯಲು ಹೇಳಿದ. ಭಟ್ಟರು ಸುರಿಯಕ್ಕೆ ನೀರು ಹೊಯ್ಯಲು ಒಂದು ತಟಕೂ ಕೆಳಗೆ ಬೀಳದಂತೆ ನೀರು ಕುಡಿದನು. ಕೋಟಿಯು ಇದೇ ರೀತಿ ನೀರನ್ನು ಕುಡಿದನು.
ಕಳೆದ ರಾತ್ರಿ ಭಟ್ಟರಿಗೆ ಕನಸು ಕಂಡಿತ್ತು. ಕನಸಿನಲ್ಲಿ ಎರಡು ಆನೆ ಮರಿಗಳು ಭಟ್ಟರ ಮನೆಯ ಅಂಗಳಕ್ಕೆ ಬಂದವು. ಸೊಂಡಿಲು ಎತ್ತಿ ಫೀಳಿಟ್ಟವು. ಕನಸಿನಲ್ಲಿ ಹೆದರಿದ ಭಟ್ಟರು ಎಚ್ಚರಗೊಂಡು ಹೊರಬಂದು ನೋಡಿದರು. ಅನೆಗಳ ಸುಳಿವೇ ಇಲ್ಲ. ಮತ್ತೆ ಮಲಗಿ ನಿದ್ರೆ ಮಾಡಿದರು. ಪುನಃ ಅದೇ ಕನಸು. ಆನೆಯ ಕನಸು ಶುಭೋದಯ ಎಂದು ತಿಳಿದ ಭಟ್ಟರು ಮತ್ತೆ ಮಲಗಿದವರಿಗೆ ಸುಖವಾಗಿ ನಿದ್ರೆ ಬಂದಿತ್ತು. ಇಂದು ಈಗ ಆನೆ ಮರಿಗಳಂತಹ ಯುವಕರು ಬಂದಿದ್ದಾರೆ. ಇವರನ್ನು ನೋಡುವಾಗ ಇವರು ಸಾಧಾರಣದವರಲ್ಲವೆಂದು ತೋರುವುದು. ಆನೆಮರಿಗಳ ಕನಸಿಗೂ ಇವರಿಗೂ ಏನೋ ಸಂಬಂಧವಿರಬೇಕು ಎಂದುಕೊಂಡವರು ಯುವಕರನ್ನು ಅಲ್ಲೆ ನಿಲ್ಲಲು ಹೇಳಿ ಮನೆಗೆ ಓಡಿದರು ಎರಡು ಕಂಚಿನ ಗಿಂಡೆಗಳಲ್ಲಿ ಬಿಸಿಬಿಸಿ ಹಾಲು ತಂದು ಕೈಯಾರೆ ಕೊಟ್ಟು ಕುಡಿಸಿದರು. ತಾಂಬೂಲ ಹಾಕಲು ಪಂಚವಳ್ಳಿಯ ಎಲೆ, ಬೆಣ್ಣೆಯಂತಹ ಸುಣ್ಣ, ಹಣ್ಣಡಿಕೆಯ ಹೋಳು ಶಿವಾಣದಲ್ಲಿ ತುಂಬಿಸಿ ಬಂಟರ ಎದುರು ಇಟ್ಟರು. ಕೋಟಿ ಚೆನ್ನಯನ ಮುಖ ನೋಡಿದ, ಚೆನ್ನಯ ಕೋಟಿಯ ಮುಖ ನೋಡಿದ. ಇಬ್ಬರ ಮುಖದಲ್ಲಿಯು ತಿಳಿನಗೆ ಅರಳಿ ಮಯಾವಾಯಿತು. ಯಜಮಾನ ಸಂಸ್ಕೃತಿ ಮಾಯಾವಾಯಿತೆಂದು ಇಬ್ಬರೂ ನೆನಪಿಸಿಕೊಂಡಿರಬಹುದು. ಇಬ್ಬರೂ ಶಿವಾಣಕ್ಕೆ ಕೈಹಾಕಿ ವೀಳ್ಯ ಮೆದ್ದರು. ಭಟ್ಟರು ವೀರರನ್ನು ವಿಚಾರಿಸಿದರು. ಕೋಟಿ ತಮ್ಮ ಜೀವನದ ಹಲವು ಭಾಗಗಳನ್ನು ವಿವರಿಸಿದ. ಭಟ್ಟರು ಎಲ್ಲವನ್ನು ಕೇಳಿಕೊಂಡವರು, ಏನು ಗ್ರಹಿಸಿದರೋ! ವೀರರೇ ಸ್ವಲ್ಪ ತಾಳಿ! ನಿಮ್ಮ ಭವಿಷ್ಯ ಹೇಳುವೆನು ಎಂದರು. ಚೀಲದಿಂದ ಕವಡೆಕಾಯಿ ತೆಗೆದು ಹಲಗೆಯ ಮೇಲೆ ಸುರಿದವರು ಗ್ರಹಕುಂಡಲಿಯಲ್ಲಿ ಚಾಲ್ತಿ ದಿನದ ಗ್ರಹಸ್ಥಾನಕ್ಕನುಸರಿಸಿ ಕವಡೆ ಕಾಯಿಗಳನ್ನಿಟ್ಟು, ನಾಲ್ಕು ದಿಕ್ಕಿನ ದೇವರಿಗೆ ವಂದಿಸಿ ಒಂದು ಮುಷ್ಟಿ ಕವಡೆಕಾಯಿ ತೆಗೆದು ಮತ್ತೊಮ್ಮೆ ದೇವರನ್ನು ನೆನೆದು ಮುಷ್ಟಿಯಲ್ಲಿದ್ದ ಕವಡೆ ಕಾಯಿಗಳನ್ನು ಹಲಗೆಗೆ ಸುರಿದು, ಲೆಖ್ಖ ಹಾಕಿ ವೀರರೇ, ಎರಡು ಮರಿಯಾನೆಗಳು ಕಾಡಿನಿಂದ ಹೊರಬಿದ್ದ ತೋಡನ್ನು ಕಲಕಿ, ಗದ್ದೆಯನ್ನು ತುಳಿದು ಕಬ್ಬಿನ ತೋಟದ ಮೇಲೆ ಕಣ್ಣಿಟ್ಟಿವೆ. ಎಂದರು. ಚೆನ್ನಯನು ಸರಿಯಾಗಿ ಹೇಳಿದ್ದಿರಿ ಮುಂದೇನು ಕಾಣುತ್ತದೆ? ಎನ್ನಲು ಜೋಯಿಸರು ಚೆನ್ನಾಗಿ ಗುಣಿಸಿ ನೋಡಿ ಅನೆಮರಿಗಳಿಗೆ ನಾಲ್ಕು ಕಡೆಗಳಿಂದ ಅಪಾಯ ಮೂಡಣದಿಂದ ಬೆಂಕಿಯ ಅಪಾಯ ಪಡುವಣದಿಂದ ಕರ್ಪದ ಮೋಸ, ಬಡಗಿನಿಂದ ಕೋವಿಯ ಏಟು, ತೆಂಕಿನಿಂದ ಮೊಸಳೆಯ ಕಾಟ-ಹೀಗೆಲ್ಲಾ ಕಾಣುತ್ತದೆ. ಹತ್ತು……. ಹತ್ತು……. …… ಐವತ್ತು…… ಅಂದರೆ…… ಐನೂರಿಗೆ ಮುಟ್ಟುವಿರಿ. ಐನೂರಿಗೆ ಮುಟ್ಟುವುದಕ್ಕೆ ಮುಂಚಿತವಾಗಿ ನಿಮಗೆ ಒಬ್ಬಳು ಹೆಂಗಸು ಕಾಣಸಿಕ್ಕುವಳು. ಅವಳಿಂದ ದಾರಿ ತಿಳಿದು ಮುಂದೆ ಹೋಗುವಾಗ ಗಡಿಕಾವಲಿನವರು ನಿಮ್ಮನ್ನು ಎದುರಿಸಿ ಸೋತು ಕಾಪಾಡುವಂತೆ ಕೇಳಿಕೊಳ್ಳುವರು. ಮತ್ತೂ ಮಂದೆ ಹೋದಾಗ ಉಲ್ಲಾಕುಳು ಆರಾಧನೆಯ ಕಲ್ಲು ಕಂಡುಬರುವುದು. ಆ ಕಲ್ಲಿಗೆ ಗೌಡರು ದೀಪ ಬೆಳೆಗಿಸುತ್ತಿರುವರು. ಅಲ್ಲಿ ಉಲ್ಲಾಕುಳು ದೈವಗಳಿಗೆ ಪ್ರಾರ್ಥನೆ ಮಾಡಿ, ಗೌಡರಿಂದ ದಾರಿ ಕೇಳಿ, ನಿಮ್ಮ ಜಾತಿಯವರ ಮನೆಗೆ ಹೋಗಿರಿ ಎಂದರು. ಐನೂರು ಅಂದರೆ ಎಲ್ಲಿ ಎಂದು ಕೋಟಿ ಕೇಳಲು, ಐನೂರು ಕಟ್ಟೆ ಕಡೆಗೆ ಸಿಗುವ ಊರು, ಐನೂರು ಅಂದರೆ ಅಯ್ಯನೂರು. ಅಯ್ಯನೂರಿಗೆ ಮುಟ್ಟಿದ ಮೇಲೆ ವಿಪರೀತ ವಿಷಗಳಿಗೆಗಳು ಎದುರಾಗಿ ಕತ್ತಿ ಕಾಳಗ ನಡೆಯಬಹುದು. ಯಾರೊಳಗೆ ಜಗಳ ಎಂಬ ಪ್ರಶ್ನೆಗೆ ಬ್ರಾಹ್ಮಣ ಮತ್ತೊಮ್ಮೆ ಲೆಖ್ಖ ಹಾಕಿ, ಜಗಳದಲ್ಲಿ ಮೊಸಳೆ ಸೀಳಾಗಿ ಸತ್ತು ಹೋಗುವುದು. ಆದರೆ ಆ……. ಆನೆಗಳು ನೆಲೆಕ್ಕೆ ಬಿದ್ದ ಮೇಲೆ ಸತ್ಯದ ಒರತೆ ಒಸರೀತು, ಕೀರ್ತಿಯ ಹೊಳೆ ಹರಿದೀತು, ಶಾಂತಿಯ ಬೆಳೆ ಬೆಳೆದೀತು, ಸುಖದ ಫಲ ಫಲಿಸೀತು. ಎಂದವನು ಕವಡೆಕಾಯಿಗಳನ್ನು ಕವಡೆ ಚೀಲಕ್ಕೆ ತುಂಬಿಸಿದನು. ಕೋಟಿ ಚೆನ್ನಯರ ಮನಸ್ಸಿಗೆ ರುಚಿಸಿತೋ ಇಲ್ಲವೋ ಮುಖದ ಭಾವನೆಯಲ್ಲಿ ಬದಲಾವಣೆ ಕಾಣಲಿಲ್ಲ. ಕುಳಿತವರು ಎದ್ದು ಕೈಮುಗಿದು ಹೊರಟರು. ಬ್ರಾಹ್ಮಣ ಎದ್ದವನು ಅಡ್ಕದ ಪಡುಗಡೆಯ ಕೊನೆಯ ತನಕ ಒಟ್ಟಿಗೆ ಬಂದು ಕೈತೋರಿಸಿ ದಾರಿಯ ವಿವರ ನೀಡಿದನು.