ಸಾಯನ ಬೈದತಿಯ ಉತ್ತರ ಕ್ರಿಯಾದಿಗಳು ಮುಗಿದಾಗ ಕಿನ್ನಿ ಚೆನ್ನಯ ಕೋಟಿ ಚೆನ್ನಯರನ್ನು ಭೇಟಿಯಾದ. ಬೀಡಿನ ಬಲ್ಲಾಳರು ಬೀಡಿಗೆ ಬರಲು ಹೇಳಿರುವರೆಂದು ತಿಳಿಸಿದ. ಆಗ ಕೋಟಿ ಚೆನ್ನಯರು ಕೆಮ್ಮಲೆಗೆ ಹೋಗಿ ನಾಗಬ್ರಹ್ಮನಿಗೆ ತಾಯಿ ಹೇಳಿದ ಹರಕೆ ಸಂದಾಯಿಸಿ ಬರುತ್ತೇವೆ ಎಂದು ಹೇಳಿದರು. ಅದಕ್ಕೆ ಕಿನ್ನಿ ಚೆನ್ನಯ ಒಪ್ಪಿಕೊಂಡ. ಅಯ್ಯಾನೂರಿನಿಂದ ಹೊರಟ ಬಂಟರು ಬೈಲಿನಲ್ಲಿಯೇ ಪಡುದಿಕ್ಕಿಗೆ ಹೋಗಿ ಕಲ್ಲೇರಿ ಹೊಳೆ ದಾಟಿ ಹೊಳೆಯ ದಡದಲ್ಲಿ ಸಾಗಿ ಎಣ್ಮೂರು ಗುತ್ತು ಸೇರಿದರು ಗುತ್ತಿನ ಬೈಲಿನ ಕೊನೆಯಲ್ಲಿ ಹೊಳೆ ಪುನಃ ಎದುರಾಯಿತು. ಇಲ್ಲಿ ಹೊಳೆಗೆ ಪಾಲವಿತ್ತು ಈ ಪಾಲನ್ನು ಪಾಡ್ಡನದಲ್ಲಿ ನೇಲ್ಯ ಪಾಪು ನೂಲ ಕೈಸಾಂಗ್ ಎಂದು ಕರೆದಿದೆ. ಇಲ್ಲಿಂದಲೇ ಕೆಮ್ಮಲೆಗೆ ನಡೆದು ಹೋಗುವ ದಾರಿ ಈಗಲೂ ಇದೆ. ಆದರೆ ವಾಹನ ಸೌಕರ್ಯದ ಮಾರ್ಗ ಎಡಮಂಗಲದಿಂದ ಈಗ ರಚನೆಯಾಗಿರುವುದು. ಕೆಮ್ಮಲೆ ಹತ್ತಿದ ಬಂಟರು ಮುಂದುವರಿಯುತ್ತಿದ್ದಾಗ ನಾಗಬ್ರಹ್ಮನ ಪೂಜೆ ಮುಗಿಸಿ ಬರುವ ಬ್ರಾಹ್ಮಣ ಎದುರಾದರು. ನಮ್ಮ ತಾಯಿ ಹೇಳಿದ ಹರಕೆಯನ್ನು ಸಲ್ಲಿಸಬೇಕಾಗಿದೆ. ತಾವು ಬರಬೇಕೆಂದು ಕೇಳಿಕೊಂಡರು. ನಾನು ಪೂಜೆ ಮಾಡಿ ಬಾಗಿಲು ಹಾಕಿ ಆಗಿದೆ. ಇನ್ನು ಸಾಧ್ಯವಿಲ್ಲ ನಾಳೆ ಬನ್ನಿರಿ ಎಂದು ಹೇಳಿ ಬ್ರಾಹ್ಮಣ ಅವನ ದಾರಿ ಹಿಡಿದ. ಕೋಟಿ ಚೆನ್ನಯರು ಬಂದವರು ಅರ್ಧದಾರಿಯಿಂದ ತಿರುಗಿ ಹೋಗಲಾರೆವೆಂದು ಹೇಳಿಕೊಂಡವರು ದಾರಿ ಮುಂದುವರಿಸಿದರು. ನಾಗಬ್ರಹ್ಮನ ಗುಡಿಯ ಎದುರಿನಲ್ಲಿ ನಿಂತು – ನಾವು ಸತ್ಯದಲ್ಲಿ ಹುಟ್ಟಿ ಸತ್ಯದಲ್ಲಿ ಬೆಳೆದವರಾದರೆ ಬಾಗಿಲು ತೆರೆದು ನಂದಾದೀಪ ಉರಿಯಲಿ ಎಂದು ಪ್ರಾರ್ಥನೆ ಮಾಡಿದರು. ಕೂಡಲೆ ಬಾಗಿಲು ತೆರೆಯಿತು ನಂದಾದೀಪ ಹೊತ್ತಿತು. ನಾಗಬ್ರಹ್ಮರೇ ಬ್ರಾಹ್ಮಣ ವೇಷದಲ್ಲಿ ಪೂಜೆ ಸಲ್ಲಿಸಿದರು. ಕೋಟಿ ಚೆನ್ನಯರು ಮುಷ್ಟಿ ತುಂಬ ಹಣ, ಬುಟ್ಟಿ ತುಂಬಾ ಹೂವು ನಾಗಬ್ರಹ್ಮರಿಗೆ ಅಪರ್ಿಸಿ ಗುಡಿಗೆ ಪ್ರದಕ್ಷಿಣೆ ಬಂದು, ಅಡ್ಡಬಿದ್ದರು. ಬಾಗಿಲು ಹಾಕಿಕೊಂಡಿತು, ದೀಪ ಸಣ್ಣದಾಯಿತು. ಕೋಟಿ ಚೆನ್ನಯರು ಎಣ್ಮೂರು ಬೀಡಿಗೆ ಸೇರಿದ ಮೇಲೂ ನಾಗಬ್ರಹ್ಮನ ದರ್ಶನ ಪಡೆಯುತ್ತಲೇ ಇದ್ದರು. ಈ ವೇಳೆ ಮೊಗೇಲರ್ು ಮತ್ತು ಕಾನದ ಕಟಿದರು ಕೋಟಿ ಚೆನ್ನಯರೊಂದಿಗೆ ಸೇರಿದ ಮಹತ್ವದ ಕಥೆ ಇಂತಿದೆ.
ಕೆಮ್ಮಲೆ ನಾಗಬ್ರಮ್ಮ ಗುಡಿ