ಚೊಕ್ಕಾಡಿಯ ಕುಬಲಾಡಿಯಲ್ಲಿ ಪ್ರಸಿದ್ಧ ಬಿಲ್ಲವರ ಮನೆ. ಕುಬಲಾಡಿ ಮನೆಗೆ ಮತ್ತು ಪಡುಮಲೆಯ ಬಿಲ್ಲವರಿಗೆ ಸಂಬಂಧವಿದ್ದಿರಲೂಬಹುದು. ಈ ನೆನಪಿನಿಂದ ಕೋಟಿ ಚೆನ್ನಯರು ಪೆರ್ಲಂಪಾಡಿಯಿಂದ ಚೊಕ್ಕಾಡಿಗೆ ಬಂದಿರಬಹುದಾದ ಹೆಚ್ಚಿನ ಸಾಧ್ಯತೆಯೂ ಇದೆ. ಅಂತೂ ಕುಬಲಾಡಿ ಶೇಣಿಯಲ್ಲಿ ಕೋಟಿ ಚೆನ್ನಯರು ಹಲವು ದಿನ ಕಳೆದದ್ದು ಅನೇಕ ಮೂಲಗಳಿಂದ ತಿಳಿದು ಬರುವುದು. ಕುಬಲಾಡಿ ಮನೆಯ ಬಿಲ್ಲವ ಆಕಸ್ಮಿಕವಾಗಿ ಮರಣ ಹೊಂದಿದ್ದ. ಪತ್ನಿ ಗಂಗು, ಚಿಕ್ಕ ಮಕ್ಕಳನ್ನು ಹರಸಾಹಸದಿಂದ ಸಾಕಿ ದೊಡ್ಡವರಾಗಿ ಮಾಡಿದಳು. ಮಕ್ಕಳು ಬೆಳೆದು ನಿಂತಿದ್ದಾರೆ. ಗಂಗು ಅಜ್ಜಿಯಾಗಿದ್ದಾಳೆ. ಮಕ್ಕಳು ಬಂಟಮಲೆಗೆ ಬೇಟೆಗೆ ಹೋಗಿದ್ದರು. ಮಯ ಮಯ ಕತ್ತಲಾಗುತ್ತಿತ್ತು. ಬೇಟೆಗೆ ಹೋಗಿದ್ದ ಮಕ್ಕಳು ಇನ್ನೂ ಬಂದಿರಲಿಲ್ಲ ಇದ್ದಕ್ಕಿದ್ದ ಹಾಗೆ ನಾಯಿ ಬೊಗಳಲು ಪ್ರಾರಂಭಿಸಿತ್ತು. ಮಕ್ಕಳ ನಿರೀಕ್ಷೆಯಲ್ಲಿ ಇದ್ದ ಅಜ್ಜಿ ಅಂಗಳಕ್ಕೆ ಇಳಿದಳು. ತಿಂಗಳ ಬೆಳಕು ಹಾಲು ಚೆಲ್ಲಿದಂತಿತ್ತು. ಒಂದೇ ಸಾಲಿನಲ್ಲಿ ಎರಡು ಜನರು ಅಂಗಳಕ್ಕೆ ಹತ್ತಿ ಬಂದರು. ಗಂಗು ಮಕ್ಕಳೆ ಆಗಿರಬಹುದೆಂದು ಇಣುಕಿ ನೋಡಿದಳು, ಮಕ್ಕಳಲ್ಲ! ನಾವು ಇಬ್ಬರು ಬಂದಿದ್ದೇವೆ. ಎಂಬ ಮಾತು ಕೇಳಿಬಂತು. ಗಂಗು ಅಜ್ಜಿಗೆ ಭಯ ಕಾತರ ಹೆಚ್ಚಾಯಿತು. ಧೈರ್ಯಮಾಡಿ ಯಾರಪ್ಪಾ ನೀವು ಹೇಳಿದ ಅಜ್ಜಿ, ಎರಡು ಹೆಜ್ಜೆ ಮುಂದಿಟ್ಟಳು. ಕೋಟಿ ಚೆನ್ನಯರ ರೂಪ ಲಾವಣ್ಯಕ್ಕೆ ಬೆರಗಾಗಿ ಪರಿವೆಯಿಲ್ಲದೆ ನಿಂತು ನೋಡುತ್ತಲೇ ಇದ್ದಲು.
ಅಜ್ಜಿ ದೂರ ದಾರಿಯಿಂದ ಬಂದಿದ್ದೇವೆ. ನಡೆದು ದಣಿದಿದ್ದೇವೆ. ಚೆನ್ನಯನಿಂದ ಮಾತು ಬಿಟ್ಟಿತು. ಎಚ್ಚರಗೊಂಡ ಅಜ್ಜಿ ಲಗುಬಗೆಯಿಂದ ಅತ್ತಿತ್ತ ನೋಡಿ ಮನೆಯಂಗಳದಲ್ಲಿ ಹಾಕಿದ ಚಪ್ಪರಕ್ಕೆ ಕರೆದು, ಚಾಪೆ ಹಾಕಿ, ಕುಳ್ಳಿರಿಸಿ ಮನೆಯ ಒಳಗೆ ಹೋಗಿ ಹಿಂಡಿ ಕಾಯಿಯ ನಾಲ್ಕಾರು ಬತ್ತಿ ತಂದು (ಹಿಂಡಿ ಬತ್ತಿ = ಪುಂಡೇಯಿ ಮರದ ಬೀಜದಿಂದ ಮಾಡಿದ ಬತ್ತಿ) ಉರಿಸಿ ನೋಡಿ, ಗಾಬರಿಯಿಂದ ಅಯ್ಯಾ ನಾವು ಬಿಲ್ಲವರು. ನೀವು ಇಲ್ಲಿಗೆ ಬರಬಾರದು. ಬಾಯರಿಕೆ ಆದರೆ ಬಾವಿಯಿಂದ ನೀರು ಸೇದಿ ಕುಡಿಯಿರಿ ಎಂದು ಅತೀ ವಿನಯದಿಂದ ಹೇಳಿದಳು.
ಅಜ್ಜಿ ನೀವು ಬಿಲ್ಲವರೆಂದು ತಿಳಿದೇ ಬಂದಿದ್ದೇವೆ. ನಾವೂ ಜಾತಿಯಲ್ಲಿ ಬಿಲ್ಲವರು ಎಂದು ಕೋಟಿ ಮುಗುಳ್ಳಕ್ಕು ಹೇಳಿದಾಗ ಅಯ್ಯೋ ಅಪ್ಪಾ! ನಿಮ್ಮ ಹೆತ್ತ ಅಪ್ಪ ಅಮ್ಮ ಯಾರು? ಎಂದು ಹೇಳಿದ ಅಜ್ಜಿ, ಅವರ ಉತ್ತರಕ್ಕೂ ಕಾಯದೆ ಮನೆಯ ಒಳಗೆ ಓಡಿದಳು. ಮನೆಯ ಒಳಗಿನಿಂದ ಕುದ್ಪೆ ತುಂಬಾ ನೀರು, ಬಾಳೆ ಎಲೆಯಲ್ಲಿ ಜೋನಿ ಬೆಲ್ಲ ತಂದು ಚಾಪೆಯ ಮುಂದೆ ಇಟ್ಟಳು. ಹಸಿದಿದ್ದ ಬಂಟರು ಬೆಲ್ಲ ತಿಂದು ನೀರು ಕುಡಿದು ಮುಂದೆ ಮಾತುಕತೆ ನಡೆಸಿದರು. ಕೋಟಿ ಚನ್ನಯರು ಪಡುಮಲೆಯ ತಮ್ಮ ಕಥೆ ವಿವರಿಸಿದರು. ಚಾಪೆಯ ಒಂದು ಪಕ್ಕದಲ್ಲಿ ಕುಳಿತ ಗಂಗು ರೆಪ್ಪೆ ಮುಚ್ಚದೆ ಕೋಟಿ ಚೆನ್ನಯರ ಕಥೆ ಆಲಿಸಿದಳು. ಅಯ್ಯೋ ಅಪ್ಪ ಹೇಗಾದರೂ ನೀವು ಇಲ್ಲಿಗೆ ಬಂದಿರಲ್ಲ! ಅಷ್ಟೆ ಸಾಕು ಎಂದಾಗ, ಬೇಟೆಗೆ ಹೋಗಿದ್ದ ಮಕ್ಕಳು ಹಂದಿ ಬೇಟೆಯಾಡಿ ಬಂದವರು, ಹೊತ್ತ ಹಂದಿಯನ್ನು ಅಂಗಳದಲ್ಲಿ ಇಳಿಸಿ ಮಾತಾಡುವುದು ಯಾರೆಂದು ಬಂದು ನೋಡಿ ದಿಗಿಲಾದರೂ ಪರಿಚಯದಿಂದ ಸಂತೃಷ್ಟರಾದರು. ಆ ದಿನ ಗಂಗು ಅಜ್ಜಿಯ ಮನೆಯಲ್ಲಿ ಕೋಟಿ ಚೆನ್ನಯರಿಗೆ ಸಡಗರದ ಅತಿಥಿ ಸತ್ಕಾರ ನಡೆಯಿತು.
ರಾತ್ರಿ ಊಟವಾದ ಮೇಲೆ ಮಾತುಕತೆ ಪ್ರಾರಂಭವಾಯಿತು. ಚೊಕ್ಕಾಡಿಯಲ್ಲಿ ಉಲ್ಲಾಕುಳು ನೆಲೆಯಾದ ಕಥೆ, ಗಂಗು ಅಜ್ಜಿಯ ಹಿರಿ ಮಗ ವಿವರಿಸಿದ. ಇಲ್ಲಿಗೆ ಉಲ್ಲಾಕುಳು ಎಂಬ ದೈವಗಳು ಬಂದಿವೆ. ನಾನು ಮೂರ್ತೆ ಮಾಡಿ ಹೊರಟಾಗ ಇಬ್ಬರು ಬ್ರಾಹ್ಮಣ ವಟುಗಳಂತೆ ಬಂದವರು, ಇಲ್ಲಿಯ ಗೌಡರ ಮನೆ ಕೇಳಿದರು. ರಾತ್ರಿ ಹೊತ್ತಾದುದರಿಂದ ಅವರಿಗೆ ದಾರಿಯಲ್ಲಿ ನಡೆಯಲು ಬೆಳಕಿಗಾಗಿ ಸೂಟೆ ಹೊತ್ತಿಸಿ ಗೌಡರ ಮನೆಗೆ ಹೋಗುವಾಗ ಗದ್ದೆಯ ಹುಣಿಗೆ ಮೆತ್ತಿದ ಕೆಸರು ಮಣ್ಣು ಮೆಟ್ಟಿ ಹೋಗಬೇಕಿತ್ತು. ಗೌಡರ ಮನೆ ಹತ್ತಿರವಾದಾಗ ಜೋರಾಗಿ ಸೂಟೆ ಕುಡಿಕಿದ ಅವಾಗ ಸೂಟೆ ಜೊರಾಗಿ ಹೊತ್ತಿಕೊಂಡು ಬೆಳಕು ಹೆಚ್ಚಿತ್ತು. ನನ್ನ ಕಾಲೀಡಿ ಗದ್ದೆ ಹುಣಿಯ ಕೆಸರು ಮಣ್ಣು ಅಂಟಿಕೊಂಡಿತ್ತು. ಬ್ರಾಹ್ಮಣರ ಕಾಲು ನೋಡಿದೆ. ಚೂರುಪಾಲು ಮಣ್ಣಿರಲಿಲ್ಲ ಆಶ್ವರ್ಯವಾದರೂ ಏನೋ ಎಂದು ಸುಮ್ಮನಾದೆ. ಸೂಟೆಯ ಬೆಳಕು ಕಂಡ ಗೌಡರು ಅಲ್ಲಿಗೆ ಬಂದರು. ಬ್ರಾಹ್ಮಣರು ಗೌಡರ ಮನೆಗೆ ಬಂದವರೆಂದು ಹೇಳಿದಾಗ ಬ್ರಾಹ್ಮಣರನ್ನೂ ಕರೆದುಕೊಂಡು ಅವರ ಮನೆಗೆ ಹೋದರು. ನಾನು ನನ್ನ ಮನೆಗೆ ಬಂದೆ.
ಗೌಡರ ಮನೆಯಲ್ಲಿ ಆತಿಥ್ಯ ಪಡೆದ ಬ್ರಾಹ್ಮಣರು ಹಾಲು ಕುಡಿದು ಹಣ್ಣು ತಿಂದು ಮಾಳಿಗೆಯಲ್ಲಿ ಮಲಗಿದರಂತೆ! ಬೆಳೆಗಾದಾಗ ಗೌಡರು ಬಂದು ನೋಡುತ್ತಾರೆ! ಬ್ರಾಹ್ಮಣರಿಲ್ಲ! ಬದಲಾಗಿ ಮೂರ್ತಿಗಳು ಕಂಡವು. ಇದು ಊರಿಡೀ ಸುದ್ದಿಯಾಯಿತು. ಚೊಕ್ಕಾಡಿಯ ಮುನ್ನೂರು ಒಕ್ಲು ಮತ್ತು ಒಡತಿ ದುಗ್ಗಮ್ಮ ಬಲ್ಲಾಳ್ತಿಗೆ ಕರೆ ಹೋಯಿತು. ಬಲ್ಲಾಳ್ತಿ ಪಲ್ಲಕ್ಕಿ ಏರಿ ಕುಳಿತು ಬಂದಳು, ಮೂರ್ತಿಗಳನ್ನು ಕಂಡು ಪರೀಕ್ಷಿಸಿ, ನೋಡಿ, ಜೋಯಿಸರಲ್ಲಿ ಕೇಳಿದಾಗ ಇಲ್ಲಿಗೆ ಬಂದದ್ದು ಬ್ರಾಹ್ಮಣರಲ್ಲಾ, ಬ್ರಾಹ್ಮಣ ವೇಷದಲ್ಲಿ ಊಲ್ಲಾಕುಳು ಬಂದಿದ್ದಾರೆ. ಅವರನ್ನು ಆರಾಧಿಸುವುದಕ್ಕಾಗಿ ಮೂರ್ತಿಗಳನ್ನು ಬಿಟ್ಟು ಹೋಗಿರುವರು. ನೀವೆಲ್ಲಾ ದುಗ್ಗಮ್ಮ ಬಲ್ಲಾಳ್ತಿಯ ಹಿರಿತನದಲ್ಲಿ ಮಾಡ ಕಟ್ಟಿಸಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದಲ್ಲಿ ಚೊಕ್ಕಾಡಿ ಮುನ್ನೂರು ಒಕ್ಕಲು ಪ್ರದೇಶಕ್ಕೆ ಕ್ಷೇಮ ಎಂದು ಜೋಯಿಸರು ಹೇಳಿದರು. ಮುಂದೆ ಚೊಕ್ಕಾಡಿ ಮುನ್ನೂರು ಒಕ್ಕಲು ಉಲ್ಲಾಕುಳು ದೈವಗಳಿಗೆ ಮಾಡ ಕಟ್ಟಿಸಿ, ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಧರ್ಮ ನಡಾವಳಿ ಮಾಡಿಸುತ್ತಾ ಬರುತ್ತಿದ್ದಾರೆ. ಇದರಿಂದ ಕಾಲಕ್ಕೆ ಸರಿಯಾಗಿ ಮಳೆ ಬಂದು ಬೆಳೆ ಭಾಗ್ಯ ತುಂಬಿ ಹರಿಯಿತು. ಜನರು ಐಕ್ಯತೆಯಿಂದ ಬಾಳಿ ಸುಖ ಸಂತೊಷದಲ್ಲಿ ಮೆರೆಯುತ್ತಿದ್ದಾರೆ, ಎಂದಾಗ ಈ ಕಥೆಯನ್ನು ಕೇಳುತ್ತಿದ್ದ ಬಂಟರು ಕೂಡಲೇ ಎದ್ದು ನಿಂತು ಕೈ ಮುಗಿದು ಏಕಾಗ್ರತೆಯಿಂದ ಉಲ್ಲಾಕುಳು ದೈವಗಳನ್ನು ಪ್ರಾರ್ಥಿಸಿ, ಕುಳಿತರು. ಆಗ ಗಂಗು ಅಜ್ಜಿಯ ಮಗ ಆಶ್ವರ್ಯಪಟ್ಟವನು ಕೇಳಿದ, ಏಕೆ ಗಾಬರಿಯಾದಂತಿದ್ದಿರಿ? ನಾಳೆ ಬೆಳಿಗ್ಗೆಯೇ ಹೋಗೋಣ. ದೈವಗಳಿಗೆ ಕಾಣಿಕೆ ಕೊಟ್ಟು ಪ್ರಾರ್ಥಿಸಿ ಬರೋಣ ಅಂದಾಗ ಕೋಟಿ ಹೇಳಿದ ನೀವು ಕಥೆ ಹೇಳುತ್ತಾ ಇದ್ದಾಗ ನನ್ನ ಮೈ ಪುಳಕಿತಗೊಂಡು ಯಾವುದೇ ಒಂದು ಶಕ್ತಿ ದೇಹವಿಡೀ ಸಂಚರಿಸಿದ ಹಾಗಾಯಿತು. ಎಂದಾಗ ಚೆನ್ನಯನೂ ತನಗೂ ಹಾಗೆಯೇ ಆದ ಅನುಭವ ವಿವರಿಸಿದ.
ಮರುದಿನ ಬೆಳಿಗ್ಗೆ ಎದ್ದವರು, ಗಂಗು ಅಜ್ಜಿಯ ಮಕ್ಕಳೊಂದಿಗೆ ಉಲ್ಲಾಕುಳು ಸ್ಥಾನಕ್ಕೆ ಹೋದರು. ಕಾಣಿಕೆ ನೀಡಿ ಪ್ರಾರ್ಥಿಸಿ ಬಂದರು. ಮುಂದೆ ಇಲ್ಲಿರುವವರೆಗೆ ಪ್ರತಿನಿತ್ಯ ಉಲ್ಲಾಕುಳು ದರ್ಶನ ಮಾಡದೆ ಯಾವ ಕೆಲಸಕ್ಕೂ ಮುಂದಾಗುತ್ತಿರಲಿಲ್ಲ. ಇಲ್ಲಿಗೆ ಉರಿದು ಕೊಂಡೇ ಬಂದಿದ್ದ ಕೊಟಿ ಚೆನ್ನಯರು ಅಜ್ಜಿಯ ಸಾಂತ್ವನದ ನೀತಿ ಭೊದನೆಯಿಂದ ತಣ್ಣಗಾದರು. ಹೆತ್ತ ತಾಯಿಯ ಪ್ರೇಮಕ್ಕೆ ವಂಚಿತರಾದ ಕೋಟಿ ಚೆನ್ನಯರು ಗಂಗು ಅಜ್ಜಿಯ ಪುತ್ರವಾತ್ಸಲ್ಯದ ಪ್ರೀತಿಗೆ ಸಂತುಷ್ಟರಾದರು. ಹೊಸ ಮನುಷ್ಯರಾಗಿ ಬದಲಾದರು. ಅಜ್ಜಿಯಿಂದ ಬೆಳಗಿನ ಗಂಜಿ ಊಟಕ್ಕೆ ದೊರಕುತ್ತಿದ್ದ ಮೊಸರು, ಮಿಡಿ ಮಾವಿನಕಾಯಿಯ ಉಪ್ಪಿನಕಾಯಿ, ಹೊಸ ರುಚಿಯಿಂದ ದೇಹ ಬೆಳೆಯಿತು. ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಕಾಡು ತೋಟದ ಗಸಿ, ಮೈಮನ ಕುದುರಿಸಿ ಇಮ್ಮಡಿ ಬಲ ತಂದಿತು. ಈ ಸಂದರ್ಭ ಕಾಡಿನ ಹೆಬ್ಬುಲಿಯ ಕಾಟದ ಸುದ್ದಿ ಬಂತು. ಹುಲಿ ಬೇಟೆಗಾಗಿ ಗಂಗು ಅಜ್ಜಿಯ ಮಕ್ಕಳೊಂದಿಗೆ ಹೋದರು ಕೋಟಿ ಚೆನ್ನಯರು. ಕಾಡಿಗೆ ಕಾಲಿಟ್ಟಿದೆ ತಡ! ಹೆಬ್ಬುಲಿ ಬಾಯಿ ತೆರೆದು ಆರ್ಭಟಿಸುತ್ತ ಬಂದಿತು. ಕೋಟಿ ಬಿಟ್ಟ ಬಾಣಗಳೆಲ್ಲಾ ವಿಫಲವಾಗಲು ಎಚ್ಚೆತ್ತ ಕೋಟಿ ಉಲ್ಲಾಕುಳು ದೈವಗಳನ್ನು ನೆನೆದು ಪ್ರಾರ್ಥಿಸಿ ಬಲವಾದ ಬಾಣ ಪ್ರಯೊಗಿಸಿದ. ಬಾಯಿಯಿಂದ ನುಗ್ಗಿದ ಬಾಣ ಬೆನ್ನಿನಲ್ಲಿ ಮುಖ ಮಾಡಿ ನಿಂತಿತು. ಹುಲಿ ಆರ್ಭಟಿಸಿ ತಲ್ಲಣಗೊಂಡು ಆಕ್ರಮಣ ಮರೆತು ಪ್ರಾಣಭಯದಿಂದ ಹಾರಿನೆಗೆದು ಪಡು ದಿಕ್ಕಿಗೆ ಓಡಿ ಬಂದು ಗದ್ದೆಯ ಬದಿಯ ಬನದಲ್ಲಿ ಬಿದ್ದು ಪ್ರಾಣಬಿಟ್ಟಿತು. ಹುಲಿ ಸತ್ತ ಸುದ್ದಿಯಿಂದ ಊರವರೆಲ್ಲಾ ಬಂದು ಸೇರಿದರು. ಬಂಟರನ್ನು ಹೊಗಳಿ ಅನೇಕ ಉಡುಗೊರೆಗಳನ್ನು ಕೊಟ್ಟು ಸನ್ಮಾನಿಸಿದರು. ಮುಂದೆ ಇವರು ಸಂಚರಿಸಿದ ಕಡೆಗಳಲ್ಲಿ ಉಲ್ಲಾಕುಳು ಸ್ಥಾನವಿದ್ದರೆ, ಪ್ರಾರ್ಥಿಸದೆ ಒಂದು ಹೆಜ್ಜೆ ಮುಂದೆ ಇಟ್ಟದ್ದಿಲ್ಲ.
ಕೋಟಿ ಚೆನ್ನಯರು ಅನೇಕ ದಿನಗಳನ್ನು ಕುಬಲಾಡಿ ಶೇಣಿಯಲ್ಲಿ ಕಳೆದವರು ಅಕ್ಕ ಕಿನ್ನಿದಾರು ಮನೆಗೆ ಹೊರಟು ನಿಂತರು. ಅಜ್ಜಿಯ ಕಾಲು ಹಿಡಿದು ಅಜ್ಜಿಯಿಂದ ಆಶೀರ್ವಾದ ಬೇಡಿದರು. ಅಜ್ಜಿ ನೂರು ವರ್ಷ ಬಾಳಿ ಬದುಕಿ ಎಂದು ಆಶೀರ್ವದಿಸಿ ಬೀಳ್ಕೊಡುವಾಗ ಬೇಗನೆ ಇನ್ನೊಮ್ಮೆ ಬನ್ನಿ ಎಂದಳು. ಕೋಟಿ ಚೆನ್ನಯರು ‘ಬಂದೇ ಬರುತ್ತೇವೆ. ನಾವೆಲ್ಲಿದ್ದರೂ ಅಜ್ಜಿ ನಿಮ್ಮನ್ನೂ ಮರೆಯುವಂತಿಲ್ಲ. ನಾವು ಇಲ್ಲಿಯೇ ನೆಲೆಯಾಗಿದ್ದೇವೆಂದು ತಿಳಿಯಿರಿ. ಉಲ್ಲಾಕುಳು ಒಲಿದ ಈ ಪುಣ್ಯ ಭೂಮಿ ನಾವು ಮರೆಯುವ ಹಾಗಿಲ್ಲ ಎಂದು ಹೇಳಿ ಹೊರಟವರು ಬಂಟಮಲೆ ಹತ್ತಿ ಪಂಜ ಸೀಮೆಗೆ ಇಳಿದರು ಬಂಟಮಲೆಯ ಇಳಿಜಾರಿನಲ್ಲಿದ್ದ ಶಂಕರನಾರಾಯಣ ದೇಗುಲಕ್ಕೆ ಪ್ರದಕ್ಷಿಣೆ ಬಂದು ಅಡ್ಡ ಬಿದ್ದು ಎದ್ದವರು ಒಟೆ ಚಾರು ಇಳಿದು ಹೊಳೆಯಲ್ಲಿ ಸ್ನಾನಮಾಡಿ ಉತ್ತರಾಭಿಮುಖವಾಗಿ ಕಂಡ ದಾರಿ ಹಿಡಿದು ಮುಂದುವರೆಸಿದರು.