ಪಡುಮಲೆಯ ಕುವ್ವೆ ತೋಟದ ಪೆಜಿನಾರ್ ಬ್ರಾಹ್ಮಣ ಜಪತಪಕ್ಕಾಗಿ ಹೊಳೆಯ ಬದಿಯಲ್ಲಿ ಕುಳಿತಿದ್ದ. ಈ ಹೊತ್ತಿಗೆ ಗಂಡ ಹೆಂಡಿರಾದ ಕೇಂಜವ ಹಕ್ಕಿಗಳು ಪ್ರಥಮ ಸಂತಾನವಾಗಿ ಪಡೆದು ಮೊಟ್ಟೆಯನ್ನು ಸೂರ್ಯ ನಾರಾಯಣ ದೇವರಿಗೆ ಅರ್ಪಿಸಲು ಆಕಾಶ ಮಾರ್ಗವಾಗಿ ಹೋಗುತ್ತಿದ್ದಾಗ ಒಂದು ಮೊಟ್ಟೆ ಜಾರಿ ಹೊಳೆಗೆ ಬಿತ್ತು. ಇದು ನಿಂಬೆ ಹಣ್ಣಿನ ರೂಪವನ್ನು ಹೊಂದಿ ಹೊಳೆಯ ಬದಿಯಲ್ಲಿ ಕುಳಿತಿದ್ದ ಬ್ರಾಹ್ಮಣರ ಹತ್ತಿರ ನೀರಿನಲ್ಲಿ ತೇಲಿ ಬಂತು. ಜಪತಪ ಮುಗಿಸಿದ ಬ್ರಾಹ್ಮಣ ಕಣ್ಣು ಬಿಟ್ಟು ನೋಡಿದಾಗ ನೀರಿನ ಬದಿಯಲ್ಲಿ ನಿಂಬೆ ಹಣ್ಣು ಕಂಡಿತು. ಈ ನಿಂಬೆ ಹಣ್ಣನ್ನು ತೆಗೆದುಕೊಂಡು ತನ್ನ ಮನೆಯ ಅಕ್ಕಿ ಬುಟ್ಟಿಯಲ್ಲಿ ಇರಿಸಿದ.
ಕೇಂಜವ ಹಕ್ಕಿಗಳು ಎರಡನೆಯದಾಗಿ ಪಡೆದ ಮೊಟ್ಟೆಯನ್ನು ಸೂರ್ಯ ನಾರಾಯಣ ದೇವರಿಗೆ ಅರ್ಪಿಸಲು ಕೊಂಡೊಯ್ಯುತ್ತಿದ್ದಾಗ ಅದೂ ಜಾರಿ ಕೆಳಗೆ ಬಿದ್ದಿತು. ಬಿದ್ದ ಮೊಟ್ಟೆ ತಿರುಳು ಒಂದು ಕಡೆ, ಚಿಪ್ಪು ಇನ್ನೊಂದು ಕಡೆ ಬಿದ್ದಿತು. ಚಿಪ್ಪು ಬಿದ್ದಲ್ಲಿ ಕಂಚು ಕಡಂಗಂದರ ಅರಮನೆ ಸೃಷ್ಟಿಯಾಯಿತು. ತಿರುಳು ಬಿದ್ದಲ್ಲಿ ಮೈಕಂದರಮನೆಯಾಯಿತು. ಒಂದು ಅರಮನೆಯಲ್ಲಿ ಏಕನಸಾಲೇರ್, ಇನ್ನೊಂದರಲ್ಲಿ ಗುಂಡು ದಬ್ಬೆ ದೈಯ್ಯಾರು ಗಿಳಿರಾಮು ಉದಿಸಿದರು. ಮುಂದೆ ಇಬ್ಬರಿಗೆ ಮದುವೆಯಾಗಿ ಬಾಮಲ್ಲ ಕುಮಾರ ಹುಟ್ಟಿದ. ತೊಟ್ಟಿಲು ಹಿಡಿದು ಆಡವಾಡುತ್ತಿದ್ದವನು ಅಂಗಳ ಇಳಿದು ಊರ ಮೈದಾನಕ್ಕೆ ಹೋಗಿ ಅಲ್ಲಿ ಸಾವಿರದೊಂದು ಅಸುರರ ಮಕ್ಕಳೊಂದಿಗೆ ಆಟವಾಡಿದನು. ಆಟದಲ್ಲಿ ಅಸುರರ ಮಕ್ಕಳು ಸೊಲನ್ನಪ್ಪಿದಾಗ ಅಸುರರ ಮಕ್ಕಳು ಉಪಾಯದಿಂದ ಬಾವಿಗಿಳಿಸಿ ಬಾವಿಯ ಮೇಲೆ ಕಲ್ಲಿನ ಚಪ್ಪಡಿಗಳನ್ನು ಹಾಸಿದರು. ಅದೇ ದಾರಿಯಿಂದ ಬಮಲ್ಲ ಕುಮಾರನ ತಾಯಿ ಈಶ್ವರ ದೇವಸ್ಥಾನಕ್ಕೆ ಹರಕೆ ಸಲ್ಲಿಸಲು ಹೋದವಳು, ಅದೇ ದಾರಿಯಿಂದ ಬಂದವಳು ಕುಮಾರನನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದಳು. ಆದರೆ ಕುಮಾರ ತಾಯಿಗೆ ಈ ರೀತಿ ಹೇಳಿದ. ತಾಯಿ, ನಾನು ಇನ್ನು ನಿನಗೆ ಸಿಕ್ಕುವುದಿಲ್ಲ ನಿನ್ನ ಹೊಟ್ಟೆಯಲ್ಲಿ ಇನ್ನೊಬ್ಬ ಹುಟ್ಟಲಿರುವನು ಎಂದು ಹೇಳಿ ಮಾಯವಾಗಿ ನಾಗಬ್ರಹ್ಮನಾದ. ದೆಯ್ಯಾರ ಪುನಃ ಗರ್ಭ ಧರಿಸಿ ಗಂಡು ಮಗುವಿಗೆ ಜನ್ಮ ನೀಡಿದಳು. ಅವನೆ ಪೆರುಮಾಳ್ ಬಲ್ಲಾಳ. ಬಲ್ಲಾಳ ಚಿಕ್ಕಂದಿನಲ್ಲೇ ತನ್ನ ತಂದೆಯನ್ನು ಕಳಕೊಂಡು ತಾಯಿಯ ಅಸರೆಯಲ್ಲಿ ಬೆಳೆದನು.
ಬ್ರಾಹ್ಮಣನ ಮನೆಯಲ್ಲಿದ್ದ ನಿಂಬೆ ಹಣ್ಣಿನ ರೂಪದ ಮೊಟ್ಟೆ ತಾನಾಗಿ ಒಡೆದು ಮಗುವಿನ ರೂಪ ಪಡೆದು ಆಳಲು ಪ್ರಾರಂಭಿಸಿತು. ಪೆಜಿನಾರ್ ದಂಪತಿಗಳು ಬಂದು ನೋಡಿದಾಗ ಮನೆಯಲ್ಲಿ ಆಳುವ ಮಗು ಕಂಡಿತು. ಬಹು ಆಸಕ್ತಿಯಿಂದ ಈ ಮಗುವನ್ನು ದೇವರ ಪ್ರಸಾದವೆಂದೇ ತಿಳಿದು ಸಲಹಿ `ಕೇದಗ` ಎಂದು ನಾಮಕರಣ ಮಾಡಿದರು. ಮಗು ಬೆಳೆಯುತ್ತಾ ಬಂದಾಗ `ಜೇವು` ಎಂದು ಕರೆಯುತ್ತಿದ್ದರು. ಈ ವೇಳೆ ಜೇವು ದೊಡ್ಡವಳಾಗಿ ಬಿಟ್ಟಳು. ಮದುವೆಯಾಗದೆ ಮೈನೆರೆದಿದ್ದರಿಂದ ಪದ್ಧತಿಯಂತೆ ಕಣ್ಣಿಗೆ ಬಟ್ಟೆಕಟ್ಟಿ ಕಾಡಿಗೆ ಬಿಟ್ಟು ಬರಬೇಕಾಯಿತು.
ಅದೇ ಪ್ರದೇಶದಲ್ಲಿ ಮೂರ್ತೆ ಮಾಡುತ್ತಿದ್ದ ಗೆಜ್ಜೆಗಿರಿ ನಂದನ ಹಿತ್ತಿಲು ಸಾಯನ ಬೈದ್ಯ ಈ ಅನಾಥ ಕನ್ಯೆಯನ್ನು ಕಂಡು ಕಣ್ಣಿನ ಬಟ್ಟೆ ಬಿಚ್ಚಿಸಿ ಮನೆಗೆ ಕರೆದುಕೊಂಡು ಮಗಳಾಗಿ ಸ್ವೀಕರಿಸಿದ. ತನ್ನ ಮನೆಯಲ್ಲಿ ದೇಯಿ (ದೇವಿ) ಎಂದು ನಾಮಕರಣ ಮಾಡಿ ಸಾಕಿದನು. ಮುಂದೆ ದೇಯಿಯನ್ನು ಕಂಗು ಹಿತ್ತಲು ಕಾಂತಣ್ಣ ಬೈದನಿಗೆ ಮದುವೆ ಮಾಡಿ ಕೊಟ್ಟನು. ಇವಳ ಚೊಚ್ಚಲ ಮಗುವಾಗಿ `ಕಿನ್ನಿದಾರು` ಹುಟ್ಟಿದಳು. ಇವಳಿಗೆ ಏಳು ವರ್ಷ ತುಂಬಿದಾಗ ಪಂಜದ ನೇರಂಕಿ ಮಾಗಣೆಯ ಕಲ್ಲೆಂಬಿ ದೋಳದ ಪಯ್ಯ ಬೈದನಿಗೆ ಮದುವೆ ಮಾಡಿಕೊಟ್ಟರು. ಆಗಿನ್ನೂ ಕೋಟಿ ಚೆನ್ನಯರು ಹುಟ್ಟಿರಲಿಲ್ಲ. ದೇಯಿ ಕೋಟಿ ಚೆನ್ನಯರ ಗರ್ಭಿಣಿಯಾಗಿದ್ದಾಗ ಕಾಂತಣ್ಣ ಬೈದನೂ ತೀರಿಕೊಂಡ.
ಇದೇ ಸಂದರ್ಭಲ್ಲಿ ಪರುಮಾಳ್ ಬಲ್ಲಾಳನ ಕಾಲಿಗೆ ಮುಳ್ಳು ಚುಚ್ಚಿ ಜೀವನ, ಮರಣದ ನಡುವೆ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದೇಯಿ ತುಂಬು ಗರ್ಭಿಣಿಯಾಗಿದ್ದಳು ಬಲ್ಲಾಳನ ಬೀಡಿಗೆ ಹೋಗಿ ಮಂತ್ರದಿಂದ ಮಾಣಿಸಿ ಮದ್ದನ್ನು ಹಚ್ಚಿ ಗುಣಪಡಿಸಿದಳು. ದೇಯಿ ತನ್ನ ಮನೆಗೆ ಹೊರಡುವಷ್ಷರಲ್ಲಿ ಹೊಟ್ಟೆ ನೋವು ಬಂದು ಬೀಡಿನ ಕೊಟ್ಟಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಮೂರು ತಿಂಗಳು ಮಕ್ಕಳನ್ನು ಹಾಲುಣಿಸಿ ಬೆಳೆಸಿದ ದೇಯಿ ಅದೊಂದು ದಿನ ಗದ್ದೆ ಬದಿಯ ತೋಡಿನಲ್ಲಿ ಬಟ್ಟೆ ಒಗೆಯುತ್ತಿದ್ದಾಗ ತೆಂಗಿನ ಮರದ ಹಸಿ ಮಡಲು ಬಿದ್ದು ಮಡಿದಳೆಂದು ಕತೆಯಿದೆ. ಅನಾಥರಾದ ಮಕ್ಕಳನ್ನು ಬಲ್ಲಾಳ ಸಾಕಿ ಕೋಟಿ ಚೆನ್ನಯರೆಂದು ಹೆಸರಿಟ್ಟು ಮುದ್ದಿನಿಂದ ಬೆಳೆಸಿದ. ಅದೇಕೋ ಮಂತ್ರಿ ಮಲ್ಲಯ್ಯ ಬುದ್ದಿವಂತನಿಗೆ ಇದು ಸರಿ ಬರಲಿಲ್ಲ ಹೀನ ಕುಲದ ಬೈದ್ಯರ ಮಕ್ಕಳು ಬೀಡಿನಲ್ಲಿ ಬೆಳೆಯುವುದೇ? ಮಲ್ಲಯ್ಯ ಬುದ್ದಿವಂತನ ಪ್ರಶ್ನೆಯಾಗಿತ್ತು. ಬುದ್ದಿವಂತನು ಹೀನಾಯವಾಗಿ ಈ ಮಕ್ಕಳನ್ನು ದೂಷಿಸುತ್ತಿದ್ದನು. ತಂದೆಯಿಲ್ಲದವರೆಂದು ಹೀಯಾಳಿಸುತ್ತಿದ್ದನು. ಬುದ್ದಿ ತಿಳಿದ ಮೇಲೆ ಕೋಟಿ ಚೆನ್ನಯರು ಬುದ್ದಿವಂತನ ದೂಷಣೆಗೆ ಕ್ರೋಧ ಬೆಳೆಸುತ್ತಲೆ ಬಂದರು.
ಬುದ್ದಿವಂತನ ಮಕ್ಕಳೊಡನೆ ಕೋಟಿ ಚೆನ್ನಯರು ಆಡುತ್ತಿದ್ದಾಗ, ಬುದ್ದಿವಂತ ಆಟದ ಚೆಂಡನ್ನು ಎಳೆದು ತನ್ನ ಮನೆಯಲ್ಲಿರಿಸಿಕೊಂಡ. ತನ್ನ ಮಕ್ಕಳಿಗೆ ಈ ಹೀನ ಕುಲದ ಮಕ್ಕಳೊಂದಿಗೆ ಆಟ ಆಡಬಾರದೆಂದು ಗದರಿಸುತ್ತಿದ್ದ. ಮುಂದೆ ಬಲ್ಲಾಳ ಕೋಟಿ ಚೆನ್ನಯರನ್ನು ಅವರ ಮಾವನ ಮನೆಗೆ ಕಳುಹಿಸಿ ಮಕ್ಕಳ ಪೋಷಣೆಯ ಖರ್ಚನ್ನು ಕೊಡುತ್ತಿದ್ದ. ಗರಡಿ ಸಾಧನೆಯ ವಿದ್ಯೆ ಕಲಿಯಲು ವ್ಯವಸ್ಥೆ ಮಾಡಿಸಿದ. ಗರಡಿ ವಿದ್ಯೆಯನ್ನು ಕಲಿತ ಕೋಟಿ ಚೆನ್ನಯರು ಬೀಡಿಗೆ ಬಂದು ಮಂತ್ರಿ ಬುದ್ದಿವಂತನ ಕೆಳಗಿನ ಗದ್ದೆಯನ್ನು ಬೇಸಾಯಕ್ಕೆ ದೊರಕಿಸಿ ಕೊಂಡರು. ಕೋಟಿ ಚೆನ್ನಯರ
ಬೇಸಾಯಕ್ಕೆ ಬುದ್ದಿವಂತ ಅನೇಕ ಉಪಟಳವನ್ನು ನೀಡಲು ಪ್ರಾರಂಬಿಸಿದ. ಬಿತ್ತಿದ ಗದ್ದೆಗೆ ನಾಲ್ಕನೇ ದಿನಕ್ಕೆ ನೀರು ಬಿಡುವುದು, ಪೈರು ಬೆಳೆದು ನಿಂತಾಗ ನೀರು ಬಿಡದಿರುವುದು, ಹೀಗೆ ಅನೇಕ ತೊಂದರೆಗಳನ್ನು ನೀಡುತ್ತಲೆ ಇದ್ದ.
ಅದೊಂದು ದಿನ ಬುದ್ದಿವಂತ, ಕೋಟಿ ಚೆನ್ನಯರು ಬಿತ್ತಿದ ಗದ್ದೆಗೆ ತನ್ನ ಗದ್ದೆಯಲ್ಲಿ ತುಂಬಿಸಿ ಇಟ್ಟ ನೀರನ್ನು ಹೊಳೆಯಂತೆ ಹರಿಸಿದ. ಆ ಹೊತ್ತು ಅಲ್ಲಿಗೆ ಬಂದ ಕೋಟಿ ಬುದ್ಧಿವಂತನನ್ನು ಆಕ್ಷೇಪಿಸಿದ. ಬುದ್ದಿವಂತ ಕೋಟಿ ಚೆನ್ನಯರನ್ನು ಬೈದು ಹಂಗಿಸಿದ. ಈ ಮಾತು ಮೂರ್ತೆಗೆ ಹೋಗಿದ್ದ ಚೆನ್ನಯ ಬಂದು ಆಲಿಸಿದವನು ಕ್ರೋಧಗೊಂಡು ಓಡಿ ಬಂದನು. ಇದನ್ನು ಕಂಡು ಬುದ್ದಿವಂತ ಹೆದರಿ ಓಡ ತೊಡಗಿದ. ಚೆನ್ನಯ ಬುದ್ದಿವಂತನನ್ನು ಓಡಿಸಿ ಹಿಡಿದು ಅಂಗಾತ ಮಲಗಿಸಿ ತನ್ನ ಸುರಿಯದಿಂದ ತಿವಿದನು. ಜೀವ ಮಾತ್ರ ಹೋಗಲಿಲ್ಲ. ಇದನ್ನು ಕಂಡ ಕೋಟಿ ತನ್ನ ಸುರಿಯದಿಂದಲೂ ಇರಿದನು. ಆಗ ಬುದ್ದಿವಂತನ ಜೀವ ಇಹಲೋಕ ಬಿಟ್ಟು ಪರಲೋಕ ಸೇರಿತು. ಗದ್ದೆಯ ಹುಣಿಯಲ್ಲಿ ಹಾರೆಯಿಂದ ಮಣ್ಣು ತೆಗೆದು ಆ ಹೊಂಡದಲ್ಲಿ ಹೆಣವನ್ನು ಮಲಗಿಸಿ ಮಣ್ಣು ಹಾಕಿ ಮುಚ್ಚಿದರು. ಅವನ ವಸ್ತ್ರಗಳನ್ನು ಮೊದಲೇ ತೆಗೆದಿಟ್ಟಿದರು. ಹಾರೆಯೊಂದಕ್ಕೆ ಅದನ್ನು ಉಡಿಸಿ, ಬುದ್ದಿವಂತ ಕುಳಿತಿರುವಂತೆ ಮಾಡಿ, ಮನೆಗೆ ಹೋದರು.
ಎಂದೂ ಬಾರದವರನ್ನು ಕಂಡ ಬುದ್ದಿವಂತನ ಹೆಂಡತಿ ಗಾಬರಿಯಾದಳು. ನಿಮ್ಮ ಯಜಮಾನ ಕಂಬಳದ ಗದ್ದೆಯ ಪದ್ಮಕಟ್ಟೆಯಲ್ಲಿ ಕುಳಿತಿದ್ದಾರೆ. ಅವರಿಗೆ ಆಯಾಸವಾಗಿದೆಯಂತೆ ಅವರನ್ನು ಕರಕೊಂಡು ಬನ್ನಿ ಅಂದರು. ಈ ಬಂಟರ ಆವೇಶ , ವೀರನಡಿಗೆ ಕಂಡು ‘ಮಕ್ಕಳು ತನ್ನ ಪತಿಯನ್ನು ಅಳಿಸಿದರೇ?’ ಎಂದು ಗೋಗರೆದು ಅತ್ತು ಕೇಳಿದಳು. ಉಳಿಸಿದರೆ ಜಿಡ್ಡೂ ಬಂದೀತು ಅಂದವರು ಮನೆಯೊಳಗೆ ನುಗ್ಗಿ ಸಣ್ಣದಿರುವಾಗ ತಮ್ಮ ಕೈಯಿಂದ ಎಳೆದು ಕೊಂಡ ಚೆಂಡನ್ನು ಹುಡುಕಿ ತೆಗೆದುಕೊಂಡು ಅಂಗಳಕ್ಕೆ ಹಾರಿ ಅಂಗಳದ ಮೆಟ್ಟಿಳಿಲಿದು ಗದ್ದೆ ಹುಣಿಯಲ್ಲಿ ನಡೆದು ಕ್ಷಣಾರ್ಧದಲ್ಲಿ ಮಾಯವಾದರು.
ಬುದ್ದಿವಂತನ ಕೊಲೆ ಮಾಡಿದ ಕೋಟಿ ಚೆನ್ನಯರು ಬಲ್ಲಾಳ ಬೀಡಿಗೆ ಕರೆಸಿ ವಿಚಾರಿಸಿದ. ಈ ಸಂಧರ್ಭದಲ್ಲಿ ಕೋಟಿ ಚೆನ್ನಯರು ತಾಯಿಗೆ ಕೊಟ್ಟ ವಚನವನ್ನು ಈಡೇರಿಸುವಂತೆ ಕೇಳಿಕೊಂಡರು. ಬೇಕಾದುದನ್ನು ಕೇಳಿರಿ ಎಂದು ಬಲ್ಲಾಳ ಹೇಳಿದ. ಆಗ ಕೋಟಿ ಚೆನ್ನಯರು ಬೀಡಿನ ಬಾಕಿಮಾರು ಗದ್ದೆ, ಹಟ್ಟಿಯ ಸರಳೆಮ್ಮೆ, ಪದ್ಮ ಕಟ್ಟೆಯ ಕೆಂದಾಳಿ ತೆಂಗಿನ ಮರ, ವರ್ಷವಿಡಿ ತುಳುವ ಮತ್ತು ಬರಿಕ ಹಣ್ಣು ಕೊಡುವ ಹಲಸಿನ ಮರಗಳನ್ನು ಕೊಡಿ ಎಂಬ ಬೇಡಿಕೆ ಮುಂದಿಟ್ಟರು. ಆಗ ಬಲ್ಲಾಳ ಅವುಗಳನ್ನು ಕೊಡಲಾಗುವುದಿಲ್ಲ, ಅದು ಅರಮನೆಗೆ ಇರಬೇಕಾದದ್ದು, ಅವನ್ನು ನೀವೂ ಕೇಳಬಾರದು – ನಾನು ಕೊಡಬಾರದು. ಬೇರೆ ಏನಾದರೂ ಕೇಳಿ ಅಂದನು. ಆಗ ಕೋಟಿ ಚೆನ್ನಯರು ನಿಮ್ಮ ಅಬ್ಬೆಯರು ತಿರುಗಾಡುವ ಹೂವಿನ ಹಿತ್ತಲಿದೆ ಅದನ್ನು ಕೊಡಿ ಎಂದಾಗ, ರೋಷಗೊಂಡ ಬಲ್ಲಾಳ ಇಂದು ಹಿತ್ತಲು ಕೇಳಿದವರು ನಾಳೆ ಅರಮನೆಯ ರಾಣಿಯರನ್ನು ಕೇಳಿ ಅಪಮಾನ ಮಾಡಿಯಾರು. ಕೊಲೆಗಾರರಿಗೆ ಸಲುಗೆ ತೋರಿಸಿದರೆ ಆಡಬಾರದ, ಕೇಳಬಾರದ ವಸ್ತುಗಳನ್ನು ಕೇಳುತ್ತಾರೆ, ‘ಬೀಡಿನ ಬಂಟಾಳುಗಳೇ ಏನನ್ನು ನೋಡುತ್ತಿರುವಿರಿ. ಈ ಕೊಲೆ ಪಾತಕಿಗಳಿಗೆ ಶಿಕ್ಷೆ ಆಗಲೇಬೇಕು ಹಿಡಿದು ಬಂಧಿಸಿರಿ’ ಎಂದಾಗ ಬೀಡಿನ ಬಂಟರು ಕುಳಿತವರು ಏಳಲಿಲ್ಲ, ನಿಂತವರು ಅಲುಗಾಡಲಿಲ್ಲ, ಸಭೆ ಮೌನವಾಯಿತು. ಅಂತಃಪುರದಲ್ಲಿ ದಿಗಿಲು ಉಂಟಾಯಿತು. ಕನಲುತ್ತಿದ್ದ ಬಲ್ಲಾಳ ಏರುಸ್ವರದಿಂದ ಕೊಲೆ ಪಾತಕಿಗಳನ್ನು ಹಿಡಿಯಿರಿ, ಕಟ್ಟಿ ಹಾಕಿರಿ ಎಂದು ಆರ್ಭಟಿಸುತ್ತಲೆ ಇದ್ದ.
ಆಗ ಕೋಟಿಯು ಮುಂದೆ ಬಂದು, ಅರಸು ಕುಳಿತಿದ್ದ ಚಾವಡಿಯ ಮುಂದಿನ ಬೋಧಿಗೆಯ ಕಂಬ ನಿಂತಿದ್ದ ಮರದ ಅಡಿ ಹಲಗೆಯಲ್ಲಿ ಕೆಳಗೆ ನಿಂತು. ನಿಮ್ಮ ಮಾತನ್ನು ಈಡೇರಿಸುವುದಕ್ಕೆ ಆರು ತಿಂಗಳ ಗಡು ಎಂದು ಹೇಳಿ ಯಾರ ತಡೆಯೂ ಇಲ್ಲದೆ ತಮ್ಮ ದಾರಿ ಹಿಡಿದು ಹೊರಟರು. ಪಡುಮಲೆ ಬಲ್ಲಾಳನ ಬಂಟರು ರೆಪ್ಪೆ ಮುಚ್ಚದೆ ನೋಡುತ್ತಿದ್ದವರು ಕಲ್ಲಾಗಿ ಹೋದರು. ಬಲ್ಲಾಳ ಆರ್ಭಟಿಸುತ್ತಿದ್ದವನು ತಣ್ಣಗಾದನು. ಕೋಟಿ ಚೆನ್ನಯರು ಬಾಕಿಮಾರು ಗದ್ದೆಗೆ ಇಳಿದು ಗೊತ್ತು ಗುರಿಯಿಲ್ಲದೆ ನಡೆಯುತ್ತಿದ್ದರು.
ಸಾಕಿದ ಬಲ್ಲಾಳ ವಿಷ ಸರ್ಪವಾದ. ಹೆತ್ತ ತಂದೆ ತಾಯು ಮೊದಲೇ ಕೈಲಾಸ ಸೇರಿದರೆ. ಅತ್ತೆ ಮಾವ ಏನು ಮಾಡುವಂತಿಲ್ಲ. ಬೀಡಿನ ಜನ ಬಲ್ಲಾಳನ ವಿರೋಧ ಕಟ್ಟಿ ನೆರವಾಗಲಾರರು. ನಮ್ಮ ಧೈರ್ಯ, ಶಕ್ತಿ, ಸಾಹಸ, ಛಲ ಮಾತ್ರ ನೆರವಾಗಬೇಕು. ಸೂರ್ಯನ ಬೆಳಕು, ಬೀಸುವ ಗಾಳಿ, ಹರಿಯುವ ನೀರನ್ನು ಬಲ್ಲಾಳ ತಪ್ಪಿಸಲಾರನಲ್ಲ ಎಂದುಕೊಂಡು ತಮ್ಮ ಅಕ್ಕನ ನೆನಪಾಗಿ ಪಂಜಕ್ಕೆ ಹೋಗಿ ಅಕ್ಕನ ಆಶ್ರಯ ಪಡೆಯುವುದೆಂದು ಅಕ್ಕ ಕಿನ್ನಿದಾರು ಇರುವ ಕಡೆಗೆ ಹೊರಟರು.
******************************